ರಾಷ್ಟ್ರೀಯ

ಕೆನಡಾ ನಂತರ ಭಾರತದ ರೈತ ಹೋರಾಟಕ್ಕೆ ಲಂಡನ್​ನ 36 ಸಂಸದರಿಂದ ಬೆಂಬಲ ಸೂಚನೆ!

Pinterest LinkedIn Tumblr


ನವದೆಹಲಿ; ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕೆನಡಾ ಬೆನ್ನಿಗೆ ಇದೀಗ ಇಡೀ ವಿಶ್ವದಾದ್ಯಂತ ಭಾರತದ ರೈತ ಹೋರಾಟಕ್ಕೆ ಬಂಬಲ ವ್ಯಕ್ತವಾಗುತ್ತಿದೆ. ರೈತ ಹೋರಾಟಕ್ಕೆ ಇಂಗ್ಲೆಂಡ್​ನ 36 ಸಂಸದರು ಇದೀಗ ಬೆಂಬಲ ಸೂಚಿಸಿದ್ದಾರೆ.

ಇಂಗ್ಲೆಂಡ್​ನ‌ ಲೇಬರ್ ಪಕ್ಷದ ತನ್ಮಂಜಿತ್ ಸಿಂಗ್ ಧೇಸಿ ನೇತೃತ್ವದ 36 ಸಂಸದರ ಬಣವು ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸಿದ್ದು, ಇಂಗ್ಲೇಂಡ್‌ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರನ್ನು ಭಾರತದೊಂದಿಗೆ ಚರ್ಚಿಸುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಮೂಲಕ ಭಾರತದ ರೈತ ಹೋರಾಟ ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಬದಲಾಗುತ್ತಿದೆ ಎನ್ನಲಾಗುತ್ತಿದೆ.

ಭಾರತದಲ್ಲಿ ಇತ್ತೀಚೆಗೆ ಜಾರಿಗೆ ತರಲಾಗಿರುವ ನೂತನ ಕೃಷಿ ಕಾನೂನುಗಳು ರೈತರು ಮತ್ತು ಕೃಷಿಯನ್ನು ಅವಲಂಬಿಸಿರುವ ಸಮುದಾಯದ ಶೋಷಣೆಗೆ ಕಾರಣವಾಗಲಿದೆ. ಈ ಮಸೂದೆಗಳು ರೈತರ ಬದುಕು ಮತ್ತು ಸ್ವಾಭಿಮಾನಕ್ಕೆ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಲಂಡನ್​ ಸಂಸದರ ತಂಡ, ಈ ಕಾನೂನಿನ ವಿರುದ್ಧ ಭಾರತದ ಮೇಲೆ ಒತ್ತಡ ಹೇರಲು ಡೊಮಿನಿಕ್ ರಾಬ್ ಅವರನ್ನು ಕೇಳಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ತಿಂಗಳು ಹಲವಾರು ಸಂಸದರು ಮೂರು ಹೊಸ ಕೃಷಿ ಕಾನೂನುಗಳ ಪರಿಣಾಮಗಳ ಬಗ್ಗೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಪತ್ರ ಬರೆದಿದ್ದಾರೆ ಎಂದು ಸಂಸದ ತನ್ಮಂಜಿತ್ ಸಿಂಗ್ ಧೇಸಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

“ನೂತನ ಕೃಷಿ ಕಾನೂನು ಭಾರತ ಎಲ್ಲಾ ರಾಜ್ಯಗಳ ರೈತ ಸಮುದಾಯದ ಮೇಲೆ ಭಾರಿ ಪರಿಣಾಮ ಬೀರಲಿದೆ. ಅಲ್ಲದೆ ಇದು ಇಂಗ್ಲೆಂಡ್​ನಲ್ಲಿರುವ ಸಿಖ್‌ ಮತ್ತು ಪಂಜಾಬ್‌ಗೆ ಸಂಬಂಧಿಸಿರುವವರಿಗೆ ನಿರ್ದಿಷ್ಟ ಕಾಳಜಿಯ ವಿಷಯವಾಗಿದೆ” ಎಂದು ಲಂಡನ್​ನಲ್ಲಿರುವ ಸಂಸದರು ಅಭಿಪ್ರಾಯಿಸಿದ್ದಾರೆ.

“ಪಂಜಾಬಿ ಸಮುದಾಯವು ರಾಜ್ಯದ ಆರ್ಥಿಕ ರಚನೆಯ ಬೆನ್ನೆಲುಬಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದು, ರೈತರ ಕಳವಳಗಳು ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯದಲ್ಲಿ ಪ್ರಬಲ ವಿಷಯವಾಗಿದೆ. ಕಾನೂನಿಂದಾಗಿ ಪಂಜಾಬ್‌ನಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ತುರ್ತಾಗಿ ಚರ್ಚಿಸಬೇಕು” ಎಂದು ಡೊಮಿನಿಕ್ ರಾಬ್ ಅವರೊಂದಿಗೆ ಪತ್ರವು ಒತ್ತಾಯಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕೆಂದು ದೆಹಲಿಯ ಗಡಿಯಲ್ಲಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸಿರುವ ನಾಲ್ಕು ಸುತ್ತಿನ ಮಾತುಕತೆ ಮುರಿದು ಬಿದ್ದಿದ್ದು, ಆಕ್ರೋಶ ಭರಿತ ರೈತರು ಇನ್ನು ಮುಂದೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಿದ್ದು ಡಿಸೆಂಬರ್ 8 ರಂದು ಮಂಗಳವಾರ ಭಾರತ್‌ ಬಂದ್‌ಗೆ ಕರೆ ನೀಡಿದ್ದಾರೆ.

Comments are closed.