ರಾಷ್ಟ್ರೀಯ

ಮದುವೆ ಮಾತುಕತೆಗೆ ಅಡ್ಡಿಪಡಿಸುತ್ತಿದ್ದಾರೆಂದು ಜೆಸಿಬಿಯಿಂದ ಪಕ್ಕದವನ ಅಂಗಡಿ ಧ್ವಂಸ ಮಾಡಿದ!

Pinterest LinkedIn Tumblr


ಕಣ್ಣೂರು: ತನ್ನ ಮದುವೆ ಮಾತುಕತೆಗೆ ಅಡ್ಡಿಪಡಿಸುತ್ತಿದ್ದಾರೆಂದು ಯುವಕನೊಬ್ಬ ಮನೆ ಪಕ್ಕದವನ ಅಂಗಡಿಯನ್ನು ಜೆಸಿಬಿಯಿಂದ ಉರುಳಿಸಿದ ಘಟನೆ ಕಣ್ಣೂರಿನ ಚೇರುಪುಳದಲ್ಲಿ ನಡೆದಿದೆ.

ಮಲಯಾಳಂ ಭಾಷೆಯ ಇತ್ತೀಚಿನ ಸೂಪರ್ ಹಿಟ್ ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ದೃಶ್ಯವೇ ರಿಯಲ್ಲಾಗಿ ನಡೆದಂತಿತ್ತು ಇಲ್ಲಿ. ಆಲ್ಬಿನ್ ಮ್ಯಾಥ್ಯೂ ಎಂಬಾತ ಜೆಸಿಬಿಯಿಂದ ನೆರೆಯ ಅಂಗಡಿಯನ್ನ ಉರುಳಿಸಿದ ಯುವಕ.

ಆಲ್ಬಿನ್ ಮ್ಯಾಥ್ಯೂ ಅಂಗಡಿಯನ್ನು ಉರುಳಿಸುವ ದೃಶ್ಯದ ವಿಡಿಯೋ ಚಿತ್ರೀಕರಣ ಆಗಿದೆ. ಜೆಸಿಬಿ ಏರುವ ಮುನ್ನ ಆತ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿ ವಿಡಿಯೋದಲ್ಲಿ ಮಾತನಾಡಿದ್ದಾನೆ. ಬಳಿಕ ಜೆಸಿಬಿ ಹತ್ತಿ ಅಂಗಡಿಯನ್ನು ನೆಲಸಮಗೊಳಿಸಿದ್ದಾನೆ.

ಪೃಥ್ವಿರಾಜ್ ಮತ್ತು ಬಿಜು ಮೆನನ್ ನಟಿಸಿರುವ ಅಯ್ಯಪ್ಪನುಂ ಕೋಶಿಯುಂ ಮಲಯಾಳ ಸಿನಿಮಾದಲ್ಲೂ ಇದೇ ರೀತಿ ನಾಯಕ ನಡುರಾತ್ರಿ ತನ್ನ ಶತ್ರುವಿನ ಮನೆಯನ್ನು ಉರುಳಿಸಿಬೀಳಿಸುವ ದೃಶ್ಯ ಇದೆ. ಆ ದೃಶ್ಯದ ಪ್ರೇರಣೆಯಿಂದಲೇ ಆಲ್ಬಿನ್ ಮ್ಯಾಥ್ಯೂ ಈ ಕೃತ್ಯ ಎಸಗಿರುವ ಸಂದೇಹ ಇದೆ.

ಮದುವೆ ಪ್ರೊಪೋಸಲ್ ಮುರಿದುಬಿದ್ದದ್ದಕ್ಕೆ ಆಕ್ರೋಶಗೊಂಡು ಮ್ಯಾಥ್ಯೂ ಈ ಕೆಲಸ ಮಾಡಿರುವಂತೆ ಮೇಲ್ನೋಟಕ್ಕೆ ತೋರುತ್ತಿದೆ. ಸ್ಥಳೀಯರೂ ಕೂಡ ಯುವಕನ ಹೇಳಿಕೆಯನ್ನು ಪುಷ್ಟೀಕರಿಸಿದ್ದಾರೆ. ಆದರೆ, ಅಂಗಡಿಯ ಮಾಲೀಕ ಸೋಜಿ ಈ ಆರೋಪವನ್ನ ತಳ್ಳಿ ಹಾಕಿದ್ದಾನೆ. ಇದೇ ವೇಳೆ, ಪೊಲೀಸರು ಆಲ್ಬಿನ್ ಮ್ಯಾಥ್ಯೂನನ್ನು ಬಂಧಿಸಿ ಪಯ್ಯನೂರ್ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರುಪಡಿಸಿ, ಬಳಿಕ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

Comments are closed.