ರಾಷ್ಟ್ರೀಯ

ಭಯೋತ್ಪಾದನೆ ವಿರೋಧಿ ಹೋರಾಟಗಾರ ಬಲ್ವಿಂದರ್‌ ಸಿಂಗ್ ಗೆ ಗುಂಡಿಕ್ಕಿ ಹತ್ಯೆ!

Pinterest LinkedIn Tumblr

ಅಮೃತಸರ: ಭಯೋತ್ಪಾದನೆ ವಿರೋಧಿ ಹೋರಾಟಗಾರ ಬಲ್ವಿಂದರ್‌ ಸಿಂಗ್‌ ಅವರ ಮೇಲೆ ದುಷ್ಕ್ರಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಶೌರ್ಯ ಚಕ್ರ ಪುರಸ್ಕೃತ ಬಲ್ವಿಂದರ್‌ ಸಿಂಗ್‌ (62 ವರ್ಷ) ಅವರನ್ನು ಅಪರಿಚಿತ ದುಷ್ಕರ್ಮಿಗಳು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ತರನ್‌ ತಾರನ್‌ ಭಿಖಿವಿಂಡ್‌ ಗ್ರಾಮದಲ್ಲಿ ತಮ್ಮ ಮನೆಗೆ ಹೊಂದಿಕೊಂಡಿರುವ ಕಚೇರಿಯಲ್ಲಿದ್ದ ಸಿಂಗ್‌ ಅವರ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ಸುರಿಮಳೆ ಗರೆದಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಲ್ವಿಂದರ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬಲ್ವಿಂದರ್‌ ಸಿಂಗ್ ಅವರು ಪಂಜಾಬ್‌ ರಾಜ್ಯದಲ್ಲಿ ಭಯೋತ್ಪಾದನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು. ಈ ಹಿಂದೆ ಅನೇಕ ಬಾರಿ ಅವರ ಮೇಲೆ ಭಯೋತ್ಪಾದಕರು ಹಲ್ಲೆ ನಡೆಸಿದ್ದರು. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಅವರಿಗೆ ಭದ್ರತೆ ಒದಗಿಸಿತ್ತು. ಆದರೆ ತರನ್‌ ತಾರನ್‌ ಪೊಲೀಸರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಬಲ್ವಿಂದರ್ ಸಿಂಗ್‌ ಅವರಿಗೆ ನೀಡಿದ್ದ ಭದ್ರತೆಯನ್ನು ವರ್ಷದ ಹಿಂದೆ ಹಿಂತೆಗೆದುಕೊಂಡಿತ್ತು ಎಂದು ಅವರ ಸಹೋದರ ರಂಚಿತ್ ಹೇಳಿದ್ದಾರೆ.

ಇದೇ ವೇಳೆ ‘ನಮ್ಮ ಇಡೀ ಕುಟುಂಬ ಭಯೋತ್ಪಾದಕರ ಹಿಟ್‌ ಲಿಸ್ಟ್‌ನಲ್ಲಿದೆ. ಹೀಗಾಗಿ ಸರ್ಕಾರ ತಮಗೆ ಹಾಗೂ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದ ಬಲ್ವಿಂದರ್ ಸಿಂಗ್ ಅವರ ಧೈರ್ಯವನ್ನು ಮೆಚ್ಚಿ ಕೇಂದ್ರ ರಕ್ಷಣಾ ಸಚಿವಾಲಯ 1993ರಲ್ಲಿ ಸಿಂಗ್ ಅವರಿಗೆ ‘ಶೌರ್ಯ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಿಂಗ್ ಅವರ ಧೈರ್ಯ ಮತ್ತು ಸಾಹಸದ ಚಟುವಟಿಕೆಗಳ ಕುರಿತು ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲಾಗಿದೆ.

Comments are closed.