ರಾಷ್ಟ್ರೀಯ

ಹಾಥ್ರಸ್​ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪರವಾಗಿ ಜನರಿಂದ ಪ್ರತಿಭಟನೆ

Pinterest LinkedIn Tumblr

ಲಕ್ನೋ: ದೇಶಾದ್ಯಂತ ಕೋಲಾಹಲ ಎಬ್ಬಿಸಿರುವ ಉತ್ತರ ಪ್ರದೇಶದ ಹಾಥ್ರಸ್​ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣ ಪ್ರಕರಣದ ನಾಲ್ವರು ಆರೋಪಿಗಳ ಪರವಾಗಿ ಮೇಲ್ಜಾತಿಗಳ ಜನರಿಂದ ಪ್ರತಿಭಟನೆ ನಡೆದಿದೆ.

ಘಟನೆ ನಡೆದ ಗ್ರಾಮದ ಹೊರಗೆ ಸ್ಥಳೀಯ ಮೇಲ್ವರ್ಗದ ಜನರ ಗುಂಪು ಪ್ರತಿಭಟನೆ ನಡೆಸಿತು. ರಾಜ್ಯ ಸರ್ಕಾರ ರಚಿಸಿರುವ ಎಸ್​ಐಟಿಯಿಂದ ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಈ ಜನರು ಆಗ್ರಹಿಸಿದ್ದಾರೆ.

ಘಟನೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಲಾಗುತ್ತಿದೆ. ನಾಲ್ವರು ಯುವಕರನ್ನು ಬೇಕಂತಲೇ ಗುರಿ ಮಾಡಲಾಗುತ್ತಿದೆ. ನಮ್ಮ ಮಕ್ಕಳು (ಆರೋಪಿಗಳು) ತಪ್ಪಿತಸ್ಥರಾಗಿದ್ದರೆ ಶಿಕ್ಷೆ ನೀಡಿ. ಆದರೆ, ಅಮಾಯಕರಿಗೆ ಶಿಕ್ಷೆ ಆಗುವಂತಾಗಬಾರದು. ತಪ್ಪಿತಸ್ಥರನ್ನು ಬಿಡಬಾರದು ಎಂದು ಮೇಲ್ವರ್ಗದವರು ಹೇಳಿದ್ದಾರೆ.

ಇದಕ್ಕೂ ಮುನ್ನ ಸಂತ್ರಸ್ತೆಯ ಬುಲ್ಗಾಡಿ ಗ್ರಾಮದಿಂದ 5 ಕಿಮೀ ದೂರದ ಭಗ್ನ ಗ್ರಾಮದಲ್ಲಿ ಪಂಚಾಯಿತಿ ನಡೆಸಿದ ಬಳಿಕ ಪ್ರತಿಭಟನೆ ಪ್ರಾರಂಭವಾಯಿತು. ಪಂಚಾಯಿತಿಯಲ್ಲಿ ಭಾಗಿಯಾಗಿದ್ದವರಲ್ಲಿ ಬಹುತೇಕರು ಈ ಪ್ರಕರಣದಲ್ಲಿ ಆರೋಪಿಗಳನ್ನ ಸುಮ್ಮನೆ ಸಿಲುಕಿಸಲಾಗಿದೆ. ಕೆಲ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಪ್ರಕರಣಕ್ಕೆ ಬಣ್ಣ ಕಟ್ಟುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದರೆನ್ನಲಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್​ಐಟಿ ತನಿಖೆ ನಡೆಯುತ್ತಿರುವಂತೆಯೇ ಸಿಬಿಐ ತನಿಖೆಗೂ ಶಿಫಾರಸು ಮಾಡಿದ್ದಾರೆ. ಘಟನೆಯಲ್ಲಿ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ.

ಸಂತ್ರಸ್ತೆಯ ಕುಟುಂಬಕ್ಕೆ ವೈ ಭದ್ರತೆ ನೀಡಲು ಆಜಾದ್ ಆಗ್ರಹ
ಇದೇ ವೇಳೆ, ಹಾಥ್ರಸ್​ನಲ್ಲಿರುವ ಸಂತ್ರಸ್ತೆಯ ಬುಲ್ಗಾಡಿ ಗ್ರಾಮಕ್ಕೆ ರಾಜಕೀಯ ಪಕ್ಷಗಳು ಹಾಗೂ ಮಾಧ್ಯಮಗಳ ಪ್ರತಿನಿಧಿಗಳ ದಂಡೇ ದೌಡಾಯಿಸುತ್ತಿದೆ. ಎಸ್​ಐಟಿ ತನಿಖೆ ನಡೆಯುತ್ತಿದ್ದುದ್ದರಿಂದ ಸರ್ಕಾರವು ಈ ಗ್ರಾಮಕ್ಕೆ ನಾಕಾಬಂದಿ ಹಾಕಿತ್ತು. ಎಸ್​ಐಟಿಯ ಪ್ರಾಥಮಿಕ ವರದಿ ಬಂದ ಬಳಿಕ ಹೊರಗಿನವರ ಭೇಟಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಿನ್ನೆ ಬಂದು ಹೋಗಿದ್ದರು. ಇಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕೂಡ ಬಂದು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಹೋಗಿದ್ದಾರೆ.

ಸಂತ್ರಸ್ತೆಯ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಅವರಿಗೆ ವೈ ಮಟ್ಟದ ಭದ್ರತೆ ನೀಡಬೇಕು. ಇಲ್ಲದಿದ್ದರೆ ಅವರನ್ನ ತನ್ನ ಮನೆಗೆ ಕರೆದೊಯ್ದು ಭದ್ರತೆ ಒದಗಿಸುತ್ತೇನೆ ಎಂದು ಆಜಾದ್ ಸವಾಲು ಹಾಕಿದ್ದಾರೆ. ಹಾಗೆಯೇ, ಪ್ರಕರಣದ ತನಿಖೆ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇದು ಹಾಥ್ರಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಸದಸ್ಯರು ಮಾಡುತ್ತಿರುವ ಒತ್ತಾಯವೂ ಹೌದು. ಎಸ್​ಐಟಿ ಅಥವಾ ಸಿಬಿಐನಿಂದ ವಿಶ್ವಾಸಾರ್ಹ ತನಿಖೆ ಸಾಧ್ಯವಿಲ್ಲ. ನ್ಯಾಯಾಂಗ ತನಿಖೆ ಆಗಬೇಕು ಎಂಬುದು ಅವರ ಆಗ್ರಹ.

Comments are closed.