ರಾಷ್ಟ್ರೀಯ

ಕೊರೋನಾದಿಂದ ಗುಣಮುಖರಾದ ಒಂದು ದಿನದಲ್ಲೇ ಜಾರ್ಖಂಡ್ ಸಚಿವ ಸಾವು

Pinterest LinkedIn Tumblr


ರಾಂಚಿ: ಕೊರೋನದಿಂದ ಗುಣಮುಖರಾದ ಒಂದು ದಿನದಲ್ಲೇ ಜಾರ್ಖಂಡ್ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಾಜಿ ಹುಸೇನ್ ಅನ್ಸಾರಿ ಅವರು ರಾಂಚಿಯ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನ್ಸಾರಿ ಅವರಿಗೆ ಸೆಪ್ಟೆಂಬರ್ 23 ರಂದು ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು. ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಕೊರೋನಾ ವೈರಸ್ ನಿಂದ ಚೇತರಿಸಿಕೊಂಡಿದ್ದ ಅನ್ಸಾರಿ ಅವರಿಗೆ ನಿನ್ನೆಯಷ್ಟೇ ಕೋವಿಡ್-19 ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದಿತ್ತು. ಆದರೆ ಇಂದು ದಿಢೀರ್ ನಿಧನರಾಗಿದ್ದಾರೆ. ಅನ್ಸಾರಿ ಅವರು ಹೃದಯ ಕಾಯಿಲೆ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು.

73 ವರ್ಷದ ಅನ್ಸಾರಿ ಅವರು 1995, 2000, 2010 ಮತ್ತು 2019 ರಲ್ಲಿ ನಾಲ್ಕು ಬಾರಿ ಮಧುಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು ಮತ್ತು 2002ರಲ್ಲಿ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ಸಂಪುಟದ ಹಿರಿಯ ಸಹೋದ್ಯೋಗಿಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

Comments are closed.