ಭೋಪಾಲ್: ಫೇಸ್ಬುಕ್ನಲ್ಲಿ ಸೀತೆಯ ಬಗ್ಗೆ ಅಪಮಾನಕಾರಿ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಆರೆಸ್ಸೆಸ್ ಸ್ವಯಂಸೇವಕನೊಬ್ಬನ ಮೇಲೆ ಗುಂಪೊಂದು ಹಲ್ಲೆ ಮಾಡಿದ ಪರಿಣಾಮ ಆತ ಮೃತಪಟ್ಟ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.
ಇದು ಮೇಕೆಗಳ ಮೇಯಿಸುವ ವಿಷಯಕ್ಕೆ ಸಂಬಂಧಿಸಿದ ಘಟನೆ ಎಂದು ಸ್ಥಳೀಯ ಆಡಳಿತ ಹೇಳುತ್ತಿದ್ದರೆ, ಸ್ಥಳೀಯರು ಇದು ಮುಸಲ್ಮಾನರ ಗುಂಪೊಂದರ ಪೂರ್ವನಿಯೋಜಿತ ಹತ್ಯೆ ಎಂದು ಆರೋಪಿಸಿವೆ.
ಆಂಗ್ಲ ಸಾಪ್ತಾಹಿಕ ಆರ್ಗನೈಜರ್ ವರದಿಯ ಪ್ರಕಾರ ಮೇ 18 ರಂದು ಖಾಂಡ್ವಾ ಜಿಲ್ಲೆಯ ಹಾಫ್ಲಾ ಹಾಗೂ ದಿಪ್ಲಾ ಗ್ರಾಮದ ನಿವಾಸಿಗಳ ಮಧ್ಯೆ ಘರ್ಷಣೆ ಏರ್ಪಟ್ಟಿತ್ತು. ಈ ಘಟನೆಯಲ್ಲಿ ಎರಡು ಬದಿಯ 10-11 ಜನ ಗಾಯಗೊಂಡಿದ್ದರು. ದಿಪ್ಲಾ ಮುಸ್ಲಿಂ ಬಾಹುಳ್ಯ ಪ್ರದೇಶವಾಗಿದೆ.
ಗಾಯಗೊಂಡವರಲ್ಲಿ 28 ವಯಸ್ಸಿನ ಆರೆಸ್ಸೆಸ್ ಸ್ವಯಂಸೇವಕ ರಾಜೇಶ್ ಫೂಲಮಾಲ್, ಅತನ ಸಹೋದರಿ ಶೀಲಾ ಪೂಲಮಾಲಿ ಹಾಗೂ ಆತನ ಗೆಳೆಯ ಪವನ ಸೋಳಂಕಿ ಸೇರಿದ್ದಾರೆ. ತಲೆಗೆ ಬಲವಾದ ಏಟು ಬಿದ್ದ ಪರಿಣಾಮ ರಾಜೇಶನನ್ನು ಇಂಧೋರ್ ಆಸ್ಪತ್ರೆಗೆ ನಂತರ ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ವಾರಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ರಾಜೇಶ್ ಮೇ 31 ರಂದು ತೀರಿಕೊಂಡಿದ್ದಾರೆ. ಅವರ ಅಂತ್ಯಸಂಸ್ಕಾರ ಜೂನ್ 1 ರಂದು ಖಾಂಡ್ವಾದಲ್ಲಿ ನೆರವೇರಿಸಲಾಯಿತು.
ಈ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪಕ್ಕಾಗಿ ಪೊಲೀಸ ಸಬ್ ಇನ್ಸಪೆಕ್ಟರ್ ಪಿ.ಸಿ.ಶಿಂಧೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಪರಾಜ್, ಸಲ್ಮಾನ್, ಶಬ್ಬೀರ್, ಅರ್ಮಾನ, ಆಸಿಫ್, ಆಮಿನ್, ಬರ್ಕತ್ ಸೇರಿದಂತೆ 20 ಜನರ ಮೇಲೆ ಪ್ರಕರಣ ದಾಖಲಾಗಿದೆ. 19 ಜನರನ್ನು ಬಂಧಿಸಲಾಗಿದೆ.
ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದ್ದು, ಫೇಸ್ಬುಕ್ ನಲ್ಲಿ ಸೀತಾಮಾತೆಯ ಬಗ್ಗೆ ಅಪಮಾನಕಾರಿ ಪೋಸ್ಟ್ ಹಾಕಿದ ಬಗ್ಗೆ ರಾಜೇಶ್ ಪೊಲೀಸರಿಗೆ ದೂರು ನೀಡಿದ್ದ. ಆರೋಪಿಗಳ ಹೆಸರುಗಳನ್ನು ಕೂಡ ತಿಳಿಸಿದ್ದ. ಆದರೆ ಪೊಲೀಸರು ಯಾವ ಕ್ರಮ ಕೈಗೂಳ್ಳಲಿಲ್ಲ ಎಂದು ಸ್ಥಳೀಯ ಆರೆಸ್ಸೆಸ್ ಸ್ವಯಂಸೇವಕರು ಹೇಳುತ್ತಾರೆ.
ರಾಜೇಶ್ ಸಹೊದರ ಮನೋಜ್ ಪ್ರಕಾರ ಪೊಲೀಸರು ಪ್ರಾರಂಭದಲ್ಲಿ ಯಾವ ಕ್ರಮ ಕೈಗೊಳ್ಳಲಿಲ್ಲ. ಯಾವಾಗ ಈ ಬಗ್ಗೆ ಜನಾಕ್ರೋಶ ಹೆಚ್ಚಾಯಿತೋ ಆಗ 4-5 ಜನರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. “ಬಿಡುಗಡೆ ಹೊಂದಿದ ನಂತರ ನನ್ನ ಸಹೋದರನಿಗಾಗಿ ಹುಡುಕಾಟ ನಡೆಸಿದ ಆರೋಪಿಗಳು ಆತನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಮೇ 18 ರಂದು ನನ್ನ ಸಹೋದರ ರಾಜೇಶ್, ಸಹೋದರಿ ಶೀಲಾ ಹಾಗೂ ಮಿತ್ರ ಪವನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಅಷ್ಟೇ ಅಲ್ಲದೇ ಮುಸ್ಲಿಂ ಪುರುಷರು ಗ್ರಾಮಸ್ಥರ ಮೇಲೆ ಕಲ್ಲು, ಇಟ್ಟಿಗೆಗಳನ್ನು ಎಸೆದರಲ್ಲದೇ, ಕಬ್ಬಿಣದ ಸಲಾಖೆಗಳು, ಕಟುಕರ ಚಾಕುವಿನಿಂದ ದಾಳಿ ಮಾಡಿದರು” ಎಂದು ಹೇಳಿದ್ದಾರೆ.
ರಾಮನಗರ ಔಟ್ಪೋಸ್ಟ್ ಠಾಣೆಯ ಸಬ್ ಇನ್ಸಪೆಕ್ಟರ್ ಪಿ.ಸಿ. ಶಿಂಧೆ ಅವರ ಆಲಕ್ಷ್ಯದಿಂದಾಗಿ ತಮ್ಮ ಸಹೋದರ ಪ್ರಾಣ ಕಳೆದುಕೂಳ್ಳಬೇಕಾಯಿತು ಎಂದು ಮನೋಜ್ ಪೊಲೀಸ್ ಅಧಿಕಾರಿಯ ಮೇಲೆ ನೇರ ಆರೋಪ ಮಾಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಪವನ್ ಸೊಳಂಕಿ ಪ್ರಕಾರ, ಮೇಕೆಗಳನ್ನು ಮೇಯಿಸುವ ವಿಷಯದಲ್ಲಿ ಗುಂಪು ಘರ್ಷಣೆಯನ್ನು ನೆಪವಾಗಿಸಿ ಆರೋಪಿಗಳು, ಫೇಸ್ಬುಕ್ ವಿಷಯದಲ್ಲಿ ತಮ್ಮ ವಿರುದ್ಧ ದೂರು ಸಲ್ಲಿಸಿದ್ದ ರಾಜೇಶನನ್ನು ಹತ್ಯೆ ಮಾಡಿದ್ದಾರೆ.
Comments are closed.