ರಾಷ್ಟ್ರೀಯ

ದೇಶದಲ್ಲಿ ಕೊರೊನಾ ಕಠೋರವಾಗಿಲ್ಲ, ಧೈರ್ಯವಾಗಿರಿ: ಕೇಂದ್ರ ಆರೋಗ್ಯ ಸಚಿವ

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ಸೋಂಕಿನ ಬಗ್ಗೆ ಭಾರತದಲ್ಲಿ ಗಾಬರಿ ಪಡುವ ಸ್ಥಿತಿ ಇಲ್ಲ. ಬೇರೆಡೆಗೆ ಹೋಲಿಸಿದರೆ ನಮ್ಮಲ್ಲಿ ಗುಣಮುಖರಾಗುವವರ ಪ್ರಮಾಣ ಹೆಚ್ಚಿರುವುದರಿಂದ ಸೋಂಕು ತಗುಲಿದರೂ ದಿಗಿಲುಗೊಳ್ಳುವ ಅಗತ್ಯ ಇಲ್ಲಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ದೇಶದ ಜನತೆಗೆ ಧೈರ್ಯ ತುಂಬಿದ್ದಾರೆ.

“ವಿಶ್ವದಾದ್ಯಂತ ಕೊರೊನಾ ಹಾವಳಿ ಇದೆ. ಭಾರತದಲ್ಲೂ ಈ ಸಾಂಕ್ರಾಮಿಕ ರೋಗ ಇದೆ. ಅದಕ್ಕೆ ಜನ ಆತಂಕ ಪಡಬೇಕಿಲ್ಲ. ಕಳೆದ ಹಲವು ವಾರಗಳಿಂದ ಕೇಂದ್ರ ಸರಕಾರ ಇದೇ ಮಾತನ್ನು ಹೇಳುತ್ತ ಬಂದಿದೆ. ಆದರೆ ಧೈರ್ಯವಾಗಿರಿ ಎಂದ ಮಾತ್ರಕ್ಕೆ ಮೈಮರೆಯಬೇಕು ಎಂದು ಅರ್ಥವಲ್ಲ. ಕೆಲವು ವಿಷಯಗಳಲ್ಲಿ ಎಚ್ಚರ ವಹಿಸಲೇಬೇಕು. ಮನೆಯಿಂದ ಹೊರ ಹೋದರೆ ಕಡ್ಡಾಯವಾಗಿ ಮಾಸ್ಕ್‌ ಧರಿಸಿ. ಆಗಾಗ ಕೈಗಳನ್ನು ತೊಳೆಯುತ್ತಿರಿ. ಎರಡು ಗಜ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ. ಇದಿಷ್ಟನ್ನು ಪಾಲಿಸಿದರೆ, ಉಳಿದಂತೆ ಸೋಂಕು ನಿಯಂತ್ರಿಸುವುದು ಸುಲಭ,’’ ಎಂದು ಆರೋಗ್ಯ ಸಚಿವರು ಹೇಳಿದರು.

ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿರುವ ಡಾ.ಹರ್ಷವರ್ಧನ್‌, ಭಾರತದ ಜತೆಗೆ ವಿಶ್ವದ ಸ್ವಾಸ್ಥ್ಯ ರಕ್ಷಣೆಯ ಕುರಿತೂ ಯೋಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ಸೋದರ ಪತ್ರಿಕೆ ದಿ ಎಕನಾಮಿಕ್‌ ಟೈಮ್ಸ್‌ ಜತೆ ಮಾತನಾಡಿದ ಅವರು, “ವೈರಾಣು ನಿಯಂತ್ರಣಕ್ಕೆ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಲಸಿಕೆ ಅದರ ಅಂತಿಮ ಘಟ್ಟದಲ್ಲಿದ್ದರೂ, ಜನ ಜಾಗೃತಿಯೂ ಈ ಹಂತದಲ್ಲಿ ತುಂಬ ನೆರವಾಗಲಿದೆ ಎಂದರು.

“ಆರ್ಥಿಕ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ದೇಶದಲ್ಲಿ ವೈರಾಣು ಪ್ರಸರಣದ ವೇಗ ಹೆಚ್ಚಿದೆ. ಆದರೆ ಅದರಿಂದ ಗಾಬರಿ ಪಡುವಂತದ್ದೇನೂ ಆಗುವುದಿಲ್ಲ. ಈ ರೋಗದ ತೀವ್ರತೆಯನ್ನು ನೀವು ಈಗಾಗಲೇ ಕಂಡಿದ್ದೀರಿ. 130 ಕೋಟಿ ಜನರಲ್ಲಿ ಇದುವರೆಗೆ 3500 ಜನ ಮಾತ್ರ ಸತ್ತಿದ್ದಾರೆ. ಅಂದರೆ ಕೊರೊನಾ ವೈರಾಣು ತೀವ್ರತೆ ಅಷ್ಟೊಂದು ಆತಂಕ ಹುಟ್ಟಿಸುವಷ್ಟು ಭೀಕರವಾಗಿಲ್ಲಎಂದೇ ಅರ್ಥ,’’ ಎಂದು ಹರ್ಷವರ್ಧನ್‌ ವಿಶ್ಲೇಷಿಸಿದರು.

ಈ ಜಗತ್ತು ಶತಮಾನಗಳಿಂದ ಅನೇಕ ರೀತಿಯ ವೈರಾಣುಗಳ ಹಾವಳಿಯನ್ನು ಎದುರಿಸಿದೆ. ಸಿಡುಬು ಮತ್ತು ಪೊಲಿಯೋದಂತಹ ಮಹಾಮಾರಿಗಳು ಇವತ್ತು ಹೇಳ ಹೆಸರಿಲ್ಲದೆ ಹೋಗಿವೆ. ಆದರೆ ಕೊರೊನಾ ವೈರಸ್‌ ವಾತಾವರಣ ಮತ್ತು ಪ್ರದೇಶಕ್ಕೆ ತಕ್ಕಂತೆ ತನ್ನ ವರ್ತನೆಯನ್ನು ಬದಲಿಸುತ್ತಿದೆ. ಸದ್ಯ ಈ ವೈರಸ್ಸಿನ ಜತೆಯಲ್ಲಿಯೇ ಬದುಕುವುದನ್ನು ಕಲಿಯಬೇಕಿದೆ ಎಂದರು.

Comments are closed.