ರಾಷ್ಟ್ರೀಯ

45 ವರ್ಷದ ನಂತರ ಮನೆಗೆ ಬಂದರೂ ಬಾಗಿಲು ಮುಚ್ಚಿದ ಕುಟುಂಬ!

Pinterest LinkedIn Tumblr


ಉತ್ತರಕಾಶಿ: ಉತ್ತರಾಖಂಡದ ಹಳ್ಳಿಯೊಂದರಲ್ಲಿ 70 ವರ್ಷದ ವೃದ್ಧನೋರ್ವ ತನ್ನ ಕುಟುಂಬವನ್ನು ತ್ಯಜಿಸಿ 45 ವರ್ಷದ ಬಳಿಕ ಮನೆಗೆ ಮರಳಿದ್ದರು. ಆದರೆ ಹಲವಾರು ಕನಸಿನೊಂದಿಗೆ ಮನೆಗೆ ಹಿಂತಿರುಗಿದ ಪತಿಯನ್ನು ಮನೆಗೆ ಪ್ರವೇಶಿಸಲು ನಿರಾಕರಿಸಿರುವ ಪತ್ನಿ ಹಾಗೂ ಮಕ್ಕಳು ಬಾಗಿಲು ಮುಚ್ಚಿರುವ ಘಟನೆ ವರದಿಯಾಗಿದೆ.

ಉತ್ತರಕಾಶಿ ಜಿಲ್ಲೆಯ ಜೆಸ್ವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಇದೀಗ ಅನ್ಯ ದಾರಿಯಿಲ್ಲದೆ ಪಂಚಾಯತ್ ಭವನದಲ್ಲಿ ಚಿನಿಯಾಲಿಸೌರ್ ಬ್ಲಾಕ್‌ನಲ್ಲಿ ವೃದ್ಧನನ್ನು ಕ್ವಾರಂಟೈನ್ ಮಾಡಲಾಗಿದೆ.

ವೃದ್ಧನ ಮನೆಯವರನ್ನು ಮನೆವೊಲಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಗ್ರಾಮ ನಿವಾಸಿಗಳು ಹೇಳಿದ್ದಾರೆ.

1975ನೇ ಇಸವಿಯಲ್ಲಿ ಮನೆ ಬಿಟ್ಟು ತೆರಳಿರುವ ಸೂರತ್ ಸಿಂಗ್ ಚೌಹಾನ್, ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಸೇಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಸಿಕ್ಕಿಬಿದ್ದ ವಲಸಿಗರು ಉತ್ತರಾಖಂಡಕ್ಕೆ ಮರಳಲು ಪ್ರಾರಂಭಿಸಿದಾಗ ಅದರಲ್ಲಿ ಚೌಹಾನ್ ಕೂಡಾ ನೊಂದಾಯಿಸಿಕೊಂಡಿದ್ದರು.

ಆದರೆ ಮರಳಿ ಬರುವುದಾಗಿ ತಿಳಿಸಿದಾಗ ಆತನನ್ನು ಸ್ವೀಕರಿಸಲು ಬಯಸುವುದಿಲ್ಲ ಎಂದು ಮನೆಯವರು ಅಧಿಕಾರಿಗಳಿಗೆ ತಿಳಿಸಿದರು. 68 ವರ್ಷದ ಪತ್ನಿ ಹಾಗೂ ಇಬ್ಬರು ಪುತ್ರರು ಮರಳಿ ಸ್ವೀಕರಿಸಲು ಮನಸ್ಸು ಮಾಡಲಿಲ್ಲ.

ತಹಶೀಲ್ದಾರ್ ವಿಎಸ್ ರಾವತ್ ಪ್ರಕಾರ, ‘ಚೌಹಾನ್ ಅವರನ್ನು ಪಂಚಾಯತ್ ಭವನದಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಇದು ಕೌಟುಂಬಿಕ ವಿಚಾರವಾಗಿದ್ದು, ಅಗತ್ಯವಿದ್ದರೆ ಮಾತ್ರ ಅಧಿಕಾರಿಗಳು ಮಧ್ಯೆ ಪ್ರವೇಶಿಸಲಿದ್ದಾರೆ’ ಎಂದಿದ್ದಾರೆ.

ವೃದ್ಧನ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಕುಟುಂಬದವರನ್ನು ಮನವೊಲಿಸಲು ಸಮುದಾಯದ ಕೆಲವರು ಪ್ರಯತ್ನಿಸಿದ್ದರು ಎಂದು ಗ್ರಾಮ ನಿವಾಸಿಗಳು ಹೇಳಿದ್ದಾರೆ.

ವೃದ್ಧನ ಮೊಮ್ಮಗ ಹಾಗೂ ಗ್ರಾಮ ಪ್ರಧಾನ್ ಆಗಿರುವ ಅಜಯ್ ಪಾಲ್ ಚೌಹಾನ್ ಪ್ರಕಾರ, ‘ನನ್ನ ಕುಟುಂಬವು ಅಜ್ಜನನ್ನು ವರ್ಷಗಳ ಹಿಂದೆಯೇ ಸೋಲನ‌್‌ನಲ್ಲಿ ಪತ್ತೆ ಹಚ್ಚಿದ್ದರು. ಅಂದು ಹಿಂತಿರುಗಿ ಬರಲು ಬೇಡಿಕೊಂಡಿದ್ದೆವು. ಅಂದವರು ಮರಳಲಿಲ್ಲ. ನನ್ನ ಅಜ್ಜಿ ಮಾತ್ರ ಅವರನ್ನು ಕ್ಷಮಿಸಬಲ್ಲಳು. ಇಷ್ಟು ವರ್ಷ ನಮ್ಮ ಬಗ್ಗೆ ಕಾಳಜಿ ವಹಿಸಲಿಲ್ಲ. ಈಗ ಯಾವುದೇ ವ್ಯವಹಾರವಿಲ್ಲದಾಗ ಮರಳಿದ್ದಾರೆ. ಆದರೂ ನನ್ನ ಅಜ್ಜಿಯನ್ನು ಮನವೊಲಿಸಲು ಪ್ರಯತ್ನಿಸುತ್ತಿರುವುದಾಗಿ’ ತಿಳಿಸಿದರು.

Comments are closed.