ರಾಷ್ಟ್ರೀಯ

ಕೊರೊನಾ ಬಂದಿರುವ ಭೀತಿ: ಸಿಆರ್‌ಪಿಎಫ್ ಅಧಿಕಾರಿ ಗುಂಡಿಕ್ಕಿಕೊಂಡು ಆತ್ಮಹತ್ಯೆ; ಮತ್ತೊಬ್ಬ ಅಧಿಕಾರಿಯೂ ಸೂಸೈಡ್

Pinterest LinkedIn Tumblr


ಶ್ರೀನಗರ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಜಮ್ಮು-ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ನಡೆದಿದೆ.

ರಾಜಸ್ಥಾನದ ಜೈಸಲ್ಮೇರ್ ನಿವಾಸಿ ಸಬ್‌-ಇನ್ಸ್‌ಪೆಕ್ಟರ್ ಫತಾಹ್ ಸಿಂಗ್ ಆತ್ಮಹತ್ಯೆಗೆ ಶರಣಾದ ಸಿಆರ್‌ಪಿಎಫ್ ಅಧಿಕಾರಿ. ಫತಾಹ್ ಸಿಂಗ್ ಅವರನ್ನು ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಮಟ್ಟನ್ ಪ್ರದೇಶದಲ್ಲಿ ಸಿಆರ್‌ಪಿಎಫ್‍ನ 49ನೇ ಬೆಟಾಲಿಯನ್‍ನೊಂದಿಗೆ ನೇಮಿಸಲಾಗಿತ್ತು. ಆದರೆ ತಾವು ಕೋವಿಡ್-19 ಸೋಂಕು ತಗುಲಬಹುದೆಂದು ಆತಂಕಕ್ಕೆ ಒಳಗಾಗಿದ್ದರು.

ಫತಾಹ್ ಸಿಂಗ್ ಮಂಗಳವಾರ ತಮ್ಮ ಬಳಿ ಇದ್ದ ರೈಫಲ್‍ನಿಂದ ಗುಂಡು ಹಾರಿಸಿಕೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಫತಾಹ್ ಸಿಂಗ್ ಮೃತಪಟ್ಟಿದ್ದಾರೆ.

“ಕೊರೊನಾ ವೈರಸ್ ತಗುಲಿರುವ ಭಯ ನನಗೆ ಕಾಡುತ್ತಿದೆ’ ಎಂದು ಫತಾಹ್ ಸಿಂಗ್ ಡೆತ್‍ನೋಟ್‍ನಲ್ಲಿ ತಿಳಿಸಿದ್ದಾರೆ. ಅವರಿಗೆ ಸೋಂಕು ತಗುಲಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅವರ ಗಂಟಲು ದ್ರವವನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ಕೋವಿಡ್-19 ಶಿಷ್ಟಾಚಾರದಂತೆ ಫತಾಹ್ ಸಿಂಗ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಮತ್ತನ್ ಠಾಣೆಯ ಅಧಿಕಾರಿ ಜಝೀಬ್ ಅಹ್ಮದ್ ಹೇಳಿದ್ದಾರೆ.

ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್‌ಪಿಎಫ್‍ನ ಮತ್ತೊಬ್ಬ ಅಧಿಕಾರಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಅವರ ಸಾವಿಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ.

Comments are closed.