ರಾಷ್ಟ್ರೀಯ

ದೇಶದಲ್ಲಿ 42 ವಲಸೆ ಕಾರ್ಮಿಕರು ರಸ್ತೆ ಅಪಘಾತಕ್ಕೆ ಬಲಿ

Pinterest LinkedIn Tumblr


ಹೊಸದಿಲ್ಲಿ: ಲಾಕ್‌ಡೌನ್‌ ಘೋಷಣೆಯಾದ ಬಳಿಕ ಕೆಲಸ ಮಾಡುತ್ತಿದ್ದ ಸ್ಥಳದಿಂದ ಸ್ವಂತ ಊರುಗಳಿಗೆ ಮರಳುವ ಧಾವಂತದಲ್ಲಿ 42 ಮಂದಿ ವಲಸೆ ಕಾರ್ಮಿಕರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಕೇಂದ್ರ ಸರಕಾರ ಮಾರ್ಚ್‌ 25ರಿಂದ ಲಾಕ್‌ಡೌನ್‌ ಘೋಷಿಸಿದರೂ ಕರ್ನಾಟಕ ಸೇರಿ ಕೆಲವು ರಾಜ್ಯಗಳು ಅದಕ್ಕಿಂತ ಮೊದಲೇ ಲಾಕ್‌ಡೌನ್‌ ಘೋಷಿಸಿದ್ದವು. ಹೀಗಾಗಿ ಕಾಲ್ನಡಿಗೆ, ಖಾಸಗಿ ವಾಹನಗಳಲ್ಲಿ ಊರಿಗೆ ತೆರಳಿದ್ದಾರೆ. ಲಾರಿ, ಟ್ಯಾಂಕರ್‌, ಕಾಂಕ್ರೀಟ್‌ ಮಿಕ್ಸರ್‌ನಂತಹ ವಾಹನಗಳಲ್ಲಿ ಅಡಗಿ ಕುಳಿತು ಪ್ರಯಾಣಿಸಿದ್ದಾರೆ. ಹೀಗೆ ಊರಿಗೆ ತೆರಳುವಾಗ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಇವರೆಲ್ಲಾ ಮೃತಪಟ್ಟಿದ್ದಾರೆ ಎಂದು ಸೇವ್‌ ಲೈಫ್‌ ಪ್ರತಿಷ್ಠಾನ ಸಿದ್ಧಪಡಿಸಿರುವ ವರದಿ ತಿಳಿಸಿದೆ.

ಮಾರ್ಚ್‌ 24 ರಿಂದ ಮೇ 3ರವರೆಗಿನ ಲಾಕ್‌ಡೌನ್‌ ವೇಳೆ ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ 140 ಮಂದಿ ಸಾವನ್ನಪ್ಪಿದ್ದಾರೆ. ಆ ಪೈಕಿ 100 ಸಾವುಗಳು ಕರ್ನಾಟಕ, ಕೇರಳ, ರಾಜಸ್ಥಾನ, ದಿಲ್ಲಿ, ಮಹಾರಾಷ್ಟ್ರ, ಪಂಜಾಬ್‌, ಗುಜರಾತ್‌ನಿಂದ ವರದಿಯಾಗಿವೆ. ಮೃತರಲ್ಲಿ ಶೇ.30ರಷ್ಟು ಮಂದಿ ವಲಸೆ ಕಾರ್ಮಿಕರು ಎಂದು ವರದಿ ಬಹಿರಂಗಪಡಿಸಿದೆ. ಇದಲ್ಲದೆ ರಸ್ತೆ ಅಪಘಾತಗಳಲ್ಲಿ 17 ಮಂದಿ ಅಗತ್ಯ ಸೇವೆ ಪೂರೈಕೆದಾರರು ಕೂಡ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

‘‘ನಮ್ಮ ದೇಶದಲ್ಲಿನ ಸರಾಸರಿ ರಸ್ತೆ ಅಪಘಾತಗಳ ಅಂಕಿ-ಅಂಶಗಳಂತೆ 600 ರಸ್ತೆ ಅಪಘಾತಗಳಲ್ಲಿ 140 ಮಂದಿ ಮೃತಪಡುವುದು ಸಾಮಾನ್ಯ ಪ್ರಮಾಣವಾಗಿದೆ. ಆದರೂ ರಸ್ತೆ ದುರಸ್ತಿ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸಲಾದ ರಸ್ತೆಗಳ ಮರುವಿನ್ಯಾಸಕ್ಕೆ ಸರಕಾರ ಒತ್ತು ಕೊಡಬೇಕಿದೆ. ಆಗ ಮಾತ್ರ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿಇಳಿಕೆ ಕಾಣಲು ಸಾಧ್ಯ,’’ ಎಂದು ಸೇವ್‌ ಲೈಫ್‌ ಪ್ರತಿಷ್ಠಾನದ ಸಿಇಒ ಪಿಯೂಷ್‌ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

Comments are closed.