ರಾಷ್ಟ್ರೀಯ

ಅನೈತಿಕ ಸಂಬಂಧ; ಬ್ಯೂಟಿಷಿಯನ್ ಕಾಲು ಕತ್ತರಿಸಿ, ಬೆಂಕಿ ಹಚ್ಚಿ ಕೊಂದ ಪ್ರಿಯಕರ

Pinterest LinkedIn Tumblr


ತಿರುವನಂತಪುರಂ (ಮೇ 2): ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಕೇರಳದ ಕೊಲ್ಲಂನ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ಬ್ಯೂಟಿಷಿಯನ್ ಆಗಿದ್ದ 42 ವರ್ಷದ ಮಹಿಳೆಯ ಶವವನ್ನು ಸುಟ್ಟು ಹಾಕಲಾಗಿತ್ತು. ಅನೈತಿಕ ಸಂಬಂಧದ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಪೊಲೀಸರು ಪತ್ತೆಹಚ್ಚಿದ್ದು, ಸಂಗೀತ ಶಿಕ್ಷಕನನ್ನು ಬಂಧಿಸಲಾಗಿದೆ.

ಕೊಲ್ಲಂ ನಿವಾಸಿಯಾಗಿದ್ದ ಸುಚಿತ್ರಾ ಎಂಬ ಮಹಿಳೆಯ ಶವವನ್ನು ಪಲಕ್ಕಾಡ್​ನಲ್ಲಿ ಸುಟ್ಟು ಹಾಕಲಾಗಿತ್ತು. ಆಕೆಯ ಎರಡೂ ಕಾಲುಗಳನ್ನು ಕತ್ತರಿಸಿ, ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಕೆಲವು ತಿಂಗಳ ಹಿಂದಷ್ಟೇ ಸುಚಿತ್ರಾ ಗಂಡನಿಗೆ ವಿಚ್ಛೇದನ ನೀಡಿದ್ದಳು. ಅಪ್ಪ-ಅಮ್ಮನ ಜೊತೆ ವಾಸವಾಗಿದ್ದ ಈಕೆ ಬ್ಯೂಟಿಷಿಯನ್ ಕೋರ್ಸ್​ಗೆ ಹೋಗುತ್ತೇನೆ ಎಂದು ಕೊಚ್ಚಿಗೆ ಹೋಗಿದ್ದಳು. ಮಾ. 18ರಂದು ಮನೆಯಿಂದ ತೆರಳಿದ್ದ ಆಕೆ ವಾಪಾಸ್​ ಬಂದಿರಲಿಲ್ಲ.

1 ವಾರ ಕಳೆದರೂ ಸುಚಿತ್ರಾ ವಾಪಾಸ್ ಬಾರದಿದ್ದುದರಿಂದ ಮತ್ತು ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ತನಗಿಂತ ದೊಡ್ಡವಳಾದ ಸುಚಿತ್ರಾಳ ಜೊತೆ 34 ವರ್ಷದ ಸಂಗೀತ ಶಿಕ್ಷಕ ಪ್ರಶಾಂತ್ ಅಕ್ರಮ ಸಂಬಂಧ ಹೊಂದಿದ್ದ. ಪ್ರಶಾಂತ್​ಗೆ ಕೂಡ ಮದುವೆಯಾಗಿದ್ದು, ಓರ್ವ ಮಗ ಕೂಡ ಇದ್ದ. ತನ್ನ ಹೆಂಡತಿಯ ದೂರದ ಸಂಬಂಧಿಯಾಗಿದ್ದ ಸುಚಿತ್ರಾಳೊಂದಿಗೆ ಪ್ರಶಾಂತ್ ಅಕ್ರಮ ಸಂಬಂಧ ಹೊಂದಿದ್ದ. ಕೊಚ್ಚಿಗೆ ಹೋಗುತ್ತೇನೆಂದು ಮನೆಯಿಂದ ಹೊರಬಂದಿದ್ದ ಆಕೆಯನ್ನು ಪ್ರಶಾಂತ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ತಾನು ಗರ್ಭಿಣಿಯಾಗಿದ್ದೇನೆ ಎಂದು ಸುಚಿತ್ರಾ ಹೇಳಿದ್ದರಿಂದ ಇಬ್ಬರ ನಡುವೆ ಜಗಳ ನಡೆದಿದೆ.

ಹೆಂಡತಿಯನ್ನು ಬಿಟ್ಟು ತನ್ನೊಂದಿಗೆ ಬರುವಂತೆ ಸುಚಿತ್ರಾ ಪ್ರಶಾಂತ್ ಬಳಿ ಕೇಳಿದ್ದಾಳೆ. ಈ ವೇಳೆ ಜಗಳದ ನಡುವೆ ಕೋಪದಿಂದ ಪ್ರಶಾಂತ್ ಸುಚಿತ್ರಾಳ ಕುತ್ತಿಗೆಗೆ ಟೇಬಲ್ ಲ್ಯಾಂಪ್​ನ ವೈರ್​ನಿಂದ ಬಿಗಿದಿದ್ದಾನೆ. ನಂತರ ಕೊಲೆಯ ವಿಚಾರ ಬೇರೆಯವರಿಗೆ ತಿಳಿದುಬಿಡುತ್ತದೆ ಎಂದು ಆಕೆಯ ಕಾಲುಗಳನ್ನು ಕತ್ತರಿಸಿ, ಹೆಣವನ್ನು ಬೇರೆ ಕಡೆಗೆ ಸಾಗಿಸಿದ್ದಾನೆ. ನಂತರ ಅಲ್ಲೇ ಆ ಶವವನ್ನು ಸುಟ್ಟು ಹಾಕಿದ್ದಾನೆ. ಅರೆಬರೆ ಸುಟ್ಟುಹೋಗಿದ್ದ ಶವವನ್ನು ನಂತರ ಅಲ್ಲೇ ಸಮಾಧಿ ಮಾಡಿದ್ದಾನೆ. ಪ್ರಶಾಂತ್ ಬಗ್ಗೆ ಪೊಲೀಸರಿಗೆ ಅನುಮಾನ ಬಂದು ವಿಚಾರಿಸಿದಾಗ ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶಾಂತ್ ಖುದ್ದು ಪೊಲೀಸರ ಬಳಿ ಸತ್ಯ ಒಪ್ಪಿಕೊಂಡಿದ್ದಾನೆ.

Comments are closed.