ರಾಷ್ಟ್ರೀಯ

ಮದ್ಯ ಸೇವನೆಯಿಂದ ಕೊರೊನಾ ಸಾಯುತ್ತದೆ: ಕಾಂಗ್ರೆಸ್‌ ಶಾಸಕ

Pinterest LinkedIn Tumblr


ರಾಜಸ್ಥಾನ: ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನ ಸೋಂಕು ಹರಡದಂತೆ ತಪ್ಪಿಸಲು ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಲಾಕ್‌ಡೌನ್‌ ಜಾರಿಯಾದಾಗಿಂದ ಮದ್ಯದಂಗಡಿಗೂ ಬೀಗ ಜಡಿಯಲಾಗಿದೆ. ಇದರಿಂದ ದಿನ ನಿತ್ಯ ಮದ್ಯ ಸೇವನೆಯ ಚಟ ಹತ್ತಿಸಿಕೊಂಡವರಿಗೆ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ಮದ್ಯ ಪಾರ್ಸೆಲ್‌ಗಾದರೂ ಅನುವು ಮಾಡಿಕೊಡಿ ಎಂದು ಅಲ್ಲಲ್ಲಿ ಕೂಗು ಕೇಳಿಬರುತ್ತಿದೆ. ಜಪ್ಪಯ್ಯ ಎಂದರೂ ಬಾರ್‌ಗಳು ಮಾತ್ರ‌ ಓಪನ್‌ ಆಗುತಿಲ್ಲ.

ಇದರಿಂದ ಬೇಸತ್ತೋ ಎಂಬಂತೆ ರಾಜಸ್ಥಾನದ ಕಾಂಗ್ರೆಸ್‌ ಶಾಸಕರೊಬ್ಬರು ‘ಮದ್ಯ ಸೇವನೆಯಿಂದ ಕೊರೊನಾ ವೈರಸ್ ಸಾಯುತ್ತದೆ. ಹಾಗಾಗಿ ಮದ್ಯದಂಗಡಿಗಳನ್ನು ತೆರೆಯಬೇಕು’ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಕುಡುಕರ ಪಾಲಿಗೆ ದೇವದೂತನಂತೆ ಭಾಸವಾಗಿದ್ದಾರೆ. ಇದೀಗ ಶಾಸಕರ ಹೇಳಿಕೆ ಭಾರೀ ಚರ್ಚೆಗೂ ಕಾರಣವಾಗಿದೆ.

ರಾಜಸ್ಥಾನದ ಸಂಗೋಡ್‌ ಶಾಸಕ ಭರತ್‌ ಸಿಂಗ್ ಕುಂದಾನ್‌ಪುರ್‌ ಎಂಬವರು ಈ ಬಗ್ಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಪತ್ರ ಬರೆದಿದ್ದು ಮದ್ಯದಂಗಡಿ ತೆರೆಯಲು ಅವಕಾಶ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಆಲ್ಕೋಹಾಲ್ ಸ್ಯಾನಿಟೈಸರ್‌ನಿಂದ ಹ್ಯಾಂಡ್‌ವಾಶ್ ಮಾಡುವ ಮೂಲಕ ಕೊರೊನಾ ವೈರಸ್‌ ಸಾಯೋದಾದ್ರೆ. ಮದ್ಯ ಸೇವನೆಯಿಂದಲೂ ಗಂಟಲಿನಲ್ಲಿರುವ ವೈರಸ್‌ಗಳು ಸಾಯುತ್ತದೆ ಎಂದು ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ.

ಇನ್ನು ಅಕ್ರಮ ಮದ್ಯ ಮಾರಾಟದ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಿರುವ ಶಾಸಕ, ರಾಜ್ಯದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಅದಕ್ಕೆ ಜನರು ಜಾಸ್ತಿ ಹಣ ನೀಡಿ ಖರೀದಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನ ಪರಿಗಣಿಸಿ ಮದ್ಯದಂಗಡಿ ತೆರೆಯೋಕೆ ಅನುಮತಿ ನೀಡುವಂತೆ ಶಾಸಕ ಭರತ್ ಸಿಂಗ್‌ ಮನವಿ ಮಾಡಿದ್ದಾರೆ.

ಇನ್ನು ರಾಜಸ್ಥಾನದ ಮತ್ತೊಬ್ಬ ಶಾಸಕ ಬಲ್ವಾನ್‌ ಸಿಂಗ್‌ ಪುನಿಯಾ ಎಂಬವರು ಕೂಡ ಮುಖ್ಯಮಂತ್ರಿಗೆ ಪತ್ರ ಬರೆದು ಲಿಕ್ಕರ್‌ ಶಾಪ್‌ಗಳನ್ನ ತೆರೆಯಲು ಅನುಮತಿ ನೀಡಿ ಎಂದು ಪತ್ರದ ಮೂಲಕ ಕೇಳಿಕೊಂಡಿದ್ದಾರೆ. ಮದ್ಯ ಮಾರಾಟ ಆರಂಭವಾದ್ರೆ ಜನರು ಸೋಶಿಯಲ್‌ ಡಿಸ್ಟೆನ್ಸಿಂಗ್‌ ಮರೆತು ಮದ್ಯದಂಗಡಿಯಲ್ಲಿ ಮುಗಿಬೀಳುವ ಸಾಧ್ಯತೆ ಇರೋದ್ರಿಂದ ಕೇಂದ್ರ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ.

ಇನ್ನೆರಡು ತಿಂಗಳು ಮದ್ಯವಿಲ್ಲದಿದ್ದರೆ 50% ಮಂದಿ ಕುಡಿತ ಬಿಡುತ್ತಾರೆ!
ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸಿದ ಸಮೀಕ್ಷೆಯಲ್ಲಿ ಮದ್ಯ ಮಾರಾಟ ಸ್ಥಗಿತವಾಗಿದ್ದರಿಂದ ಮನೆಯಲ್ಲಿ ನೆಮ್ಮದಿ ಇದೆ, ಹಣ ಉಳಿಯುತ್ತಿದೆ ಎಂದು ಹಲವು ಗ್ರಾಮದ ಜನರು ಅಭಿಪ್ರಾಯ ಪಟ್ಟಿದ್ದರು. ಇನ್ನು ಎರಡು ತಿಂಗಳು ಮದ್ಯ ನಿಷೇಧಿಸಿದರೆ ಕರ್ನಾಟದಲ್ಲಿ ಶೇ.50 ರಷ್ಟು ಜನ ಕುಡಿತ ಬಿಡಲಿದ್ದಾರೆ ಅಂತಲೂ ಅಭಿಪ್ರಾಯಪಟ್ಟಿದ್ದರು.

Comments are closed.