ರಾಷ್ಟ್ರೀಯ

ಬಾಂದ್ರಾ ನಿಲ್ದಾಣದಲ್ಲಿ ಸಾವಿರಾರು ವಲಸೆ ಕಾರ್ಮಿಕರ ಜಮಾವಣೆ; ಸುದ್ದಿವಾಹಿನಿಯ ಪತ್ರಕರ್ತನ ವಿರುದ್ಧ ಎಫ್ ಐಆರ್-ವಿನಯ್ ದುಬೆಗೆ ಪೊಲೀಸ್ ಕಸ್ಟಡಿ

Pinterest LinkedIn Tumblr

ಮುಂಬೈ: ಮುಂಬೈನ ಬಾಂದ್ರಾ ನಿಲ್ದಾಣದಲ್ಲಿ ಸಾವಿರಾರು ವಲಸೆ ಕಾರ್ಮಿಕರ ಜಮಾವಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ನಿನ್ನೆ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ತಮ್ಮ ತಮ್ಮ ತವರಿಗೆ ತೆರಳಲು ಸಾವಿರಾರು ವಲಸೆ ಕಾರ್ಮಿಕರು ಸೇರಿದ್ದರು. ಕೊರೋನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರ ಈ ನಡೆ ನಿಜಕ್ಕೂ ಆತಂಕ ಮೂಡಿಸುವಂತಿತ್ತು. ಈ ಹಿಂದೆ ಪ್ರಧಾನಿ ಘೋಷಣೆ ಮಾಡಿದ್ದ ಲಾಕ್ ಡೌನ್ ಅವಧಿ ನಿನ್ನೆಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಕಾರ್ಮಿಕರು ತಮ್ಮ ತಮ್ಮ ತವರಿಗೆ ಮರಳಲು ಆಗಮಿಸಿದ್ದರು. ಆದರೆ ಕೂಡಲೇ ಎಚ್ಚೆತ್ತ ಪೊಲೀಸರು ಲಾಠಿ ಚಾರ್ಜ್ ಮಾಡಿ ಎಲ್ಲರನ್ನೂ ಚದುರಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಂದ್ರಾ ಪೊಲೀಸರು ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಒಸ್ಮಾನಾಬಾದ್ ಮೂಲದ ಪತ್ರಕರ್ತ ರಾಹುಲ್ ಕುಲಕರ್ಣಿ ಎಂಬಾತನ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಈತ ಲಾಕ್ ಡೌನ್ ಮುಕ್ತಾಯವಾದ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಜನ್ ಸಾಧಾರಣ್ ವಿಶೇಷ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ ಎಂದು ವರದಿ ಮಾಡಿದ್ದ. ಆದರೆ ವಾಸ್ತವವಾಗಿ ಸರ್ಕಾರ ಅಂತಹ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಹೀಗಾಗಿ ವದಂತಿ ಹಬ್ಬಿಸಿದ ಆರೋಪದ ಮೇರೆಗೆ ಆತನ ವಿರುದ್ಧ ಐಪಿಸಿ ಸೆಕ್ಷನ್ 188, 269, 270 ಮತ್ತು 117ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.

ವಿನಯ್ ದುಬೆಗೆ ಪೊಲೀಸ್ ಕಸ್ಟಡಿ
ಸುಳ್ಳು ವದಂತಿ ಹಬ್ಬಿಸಿ ಪ್ರಚೋದನೆ ನೀಡಿ ಸಾವಿರಾರು ವಲಸಿಗರು ನಿನ್ನೆ ಮುಂಬೈಯ ಬಾಂದ್ರಾ ನಿಲ್ದಾಣದಲ್ಲಿ ಸೇರುವಂತೆ ಮಾಡಿ ಪೊಲೀಸರ ಅತಿಥಿಯಾಗಿರುವ ಸ್ವಯಂ ಘೋಷಿತ ಕಾರ್ಮಿಕ ನಾಯಕ ವಿನಯ್ ದುಬೆಯನ್ನು ಏಪ್ರಿಲ್ 21ರವರೆಗೂ ಪೊಲೀಸ್ ವಶಕ್ಕೆ ನೀಡಲಾಗಿದೆ.

ವಿನಯ್ ದುಬೆ ಸೋಷಿಯಲ್ ಮೀಡಿಯಾಗಳಲ್ಲಿ ಚಲೋ ಘರ್ ಕಿ(ಮನೆಗೆ ಹೋಗೋಣ)ಎಂಬ ಅಭಿಯಾನವನ್ನು ಆರಂಭಿಸಿದ್ದರು. ಇದರಿಂದ ಕೊರೋನಾ ವೈರಸ್ ಲಾಕ್ ಡೌನ್ ನಿಂದ ಅಲ್ಲಲ್ಲೇ ಸಿಕ್ಕಿಹಾಕಿಕೊಂಡಿದ್ದ ವಲಸಿಗರು ತಮ್ಮ ತಮ್ಮ ಊರುಗಳಿಗೆ ಹೋಗಲು ಪ್ರಚೋದಿಸಿದ್ದ. ಹೀಗಾಗಿ ಈತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 117, 153 A, 188, 269, 270, 505 (2) ಮತ್ತು 505 (3)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು.

Comments are closed.