ರಾಷ್ಟ್ರೀಯ

ಜೇಬಿನಲ್ಲಿ 9 ರೂ. ಇಟ್ಟುಕೊಂಡು ಕೇಜ್ರಿವಾಲ್ ವಿರುದ್ಧ ಕನ್ನಡಿಗನ ಸ್ಪರ್ಧೆ

Pinterest LinkedIn Tumblr


ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಸೋಮವಾರ ಭರ್ಜರಿ ರೋಡ್ ಶೋ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಅತ್ತ ಕಾಂಗ್ರೆಸ್, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು ಕೇಜ್ರಿವಾಲ್ ವಿರುದ್ಧ ಅಭ್ಯರ್ಥಿ ಇಲ್ಲದೆ ಪರದಾಡುತ್ತಿದ್ದರೆ, ಇತ್ತ ಕೇಜ್ರಿವಾಲ್ ವಿರುದ್ಧ ಕನ್ನಡಿಗರೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ.

ಶ್ರೀ ವೆಂಕಟೇಶ್ವರ್ ಮಹಾ ಸ್ವಾಮೀಜಿ ಅರವಿಂದ್ ಕೇಜ್ರಿವಾಲ್ ವಿರುದ್ಧ ನಾಮಪತ್ರ ಸಲ್ಲಿಸಿರುವ ಕನ್ನಡಿಗ. ಬಿಜಾಪುರ ಜಿಲ್ಲೆಯ ಚಡಚಣ ತಾಲೂಕು ಬರಡೊಲಾ ಗ್ರಾಮದ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ದೀಪಕ್. ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಇವರು ದೆಹಲಿ ಟೋಪಿವಾಲ್‍ನ ವಿರುದ್ಧ ತೊಡೆ ತಟ್ಟಿದ್ದಾರೆ.

ಸ್ವಾಮೀಜಿ ಅವರು ಜನವರಿ 14ರಂದೇ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಅಫಿಡವಿಟ್‍ನಲ್ಲಿ ನನ್ನ ಬಳಿ ಇರೋದು ಒಂಭತ್ತು ರೂಪಾಯಿ, 99,999 ರೂಪಾಯಿ ಸಾಲ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಸಮಾಜದಲ್ಲಿರುವ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಬೇಕು, ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು, ಖಾದಿ ಹಾಕಿರುವ ರಾಜಕಾರಾಣಿಗಳು ಸಾಮಾಜಿಕ ಕಾರ್ಯ ಮಾಡದ ಹಿನ್ನೆಲೆ ಕಾವಿ ತೊಟ್ಟು ಚುನಾವಣೆಗೆ ಸ್ಪರ್ಧಿಸಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡುವುದು ಇವರ ಉದ್ದೇಶವಾಗಿದೆ. ಕಾಂಗ್ರೆಸ್, ಬಿಜೆಪಿ, ಎನ್‍ಸಿಪಿಯಿಂದ ಬಿ ಫಾರಂ ಕೇಳಿದ್ದರು. ಆದರೆ ಇವರಿಗೆ ಬಿ ಫಾರಂ ಸಿಗದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಹದಿನೆಂಟು ಚುನಾವಣೆಗಳಲ್ಲಿ ಸ್ಪರ್ಧೆ:
ವೆಂಕಟೇಶ್ವರ್ ಮಹಾ ಸ್ವಾಮೀಜಿ ಅವರು ತಂಗಿರುವ ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭಾ, ರಾಜ್ಯಸಭಾ ಚುನಾವಣೆಗಳಲ್ಲೂ ಸ್ಪರ್ಧಿಸಿದ್ದಾರೆ. ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಗೋವಾದಲ್ಲಿ ಇದುವರೆಗೂ ಹದಿನೆಂಟು ಚುನಾವಣೆಗಳಲ್ಲಿ ಇವರು ಸ್ಪರ್ಧೆ ಮಾಡಿದ್ದಾರೆ.

ಒಂದಲ್ಲ ಒಂದು ದಿನ ನನ್ನ ಉದ್ದೇಶ ಜನರಿಗೆ ಅರ್ಥವಾಗಲಿದೆ, ಚುನಾವಣೆ ಗೆಲ್ಲಲಿದ್ದೇನೆ ಅನ್ನೊದು ಇವರ ವಿಶ್ವಾಸ. ಏನೇ ಆದರೂ ಕರ್ನಾಟಕ ಬಿಟ್ಟು ದೆಹಲಿಗೆ ಬಂದು ಸಿಎಂ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಇವರ ಧೈರ್ಯವನ್ನ ನಿಜಕ್ಕೂ ಮೆಚ್ಚಬೇಕು.

Comments are closed.