ನವದೆಹಲಿ: ಉತ್ತರ ಭಾರತದಾದ್ಯಂತ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ದೆಹಲಿಯಲ್ಲಿ ಘೋಷಿಸಲಾಗಿದ್ದ ರೆಡ್ ಅಲರ್ಟ್ ಅನ್ನು ಭಾನುವಾರ ಇತರೆ ರಾಜ್ಯಗಳಿಗೂ ವಿಸ್ತರಿಸಲಾಗಿದೆ.
ದೆಹಲಿ, ಉತ್ತರಪ್ರದೇಶ, ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ಬಿಹಾರದಲ್ಲೂ ರೆಡ್ ಕಲರ್ ವಾರ್ನಿಂಗ್ ನೀಡಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಹೇಳಿದೆ. ದೆಹಲಿಯಲ್ಲಿ ಭಾನುವಾರ ಮೈನಸ್ 3.2 ಡಿ.ಸೆ. ತಾಪಮಾನ ದಾಖಲಾಗಿದೆ. ಮಂಗಳವಾರದವರೆಗೂ ಇದೇ ಸ್ಥಿತಿ ಮುಂದುವರಿಯಲಿದ್ದು, ಡಿ.31ರ ರಾತ್ರಿ ಮಳೆಯಾಗುವ ಸಾಧ್ಯತೆಯಿದ್ದು, ಅದರಿಂದಾಗಿ ಚಳಿ ಇಳಿಮುಖವಾಗಬಹುದು ಎಂದೂ ಇಲಾಖೆ ತಿಳಿಸಿದೆ.
ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಭಾನುವಾರ ಮೈನಸ್ 6.2 ಡಿ.ಸೆ. ತಾಪಮಾನ ದಾಖಲಾಗಿದ್ದು, ಪ್ರಸಿದ್ಧ ದಾಲ್ ಸರೋವರದ ನೀರು ಮಂಜುಗಡ್ಡೆಯಾಗಿ ಪರಿವರ್ತಿತವಾಗಿದೆ.
ಶಾಲೆಗಳಿಗೆ ರಜೆ:
ನಿರಂತರ ಚಳಿಗಾಳಿಗೆ ತತ್ತರಿಸಿರುವ ಹರ್ಯಾಣದಲ್ಲಿ 2 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸೋಮವಾರ ಮತ್ತು ಮಂಗಳವಾರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದ್ದು, ಅದಾದ ನಂತರ ಜ.1ರಿಂದ 15ರವರೆಗೆ ಎಲ್ಲ ಶಾಲೆಗಳೂ ಚಳಿಗಾಲದ ರಜೆ ಹಿನ್ನೆಲೆಯಲ್ಲಿ ಮುಚ್ಚಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Comments are closed.