ಜಮ್ಮು-ಕಾಶ್ಮೀರ: ಗಡಿನಿಯಂತ್ರಣ ರೇಖೆ ಸಮೀಪ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನ ಪಡೆಗೆ ಭಾರತೀಯ ಸೇನೆಯ ಪ್ರತಿದಾಳಿಗೆ ನಾಲ್ವರು ಪಾಕಿಸ್ತಾನಿ ಯೋಧರು ಸಾವನ್ನಪ್ಪಿರುವ ಘಟನೆ ಕುಪ್ವಾರ ಮತ್ತು ಪೂಂಛ್ ಸೆಕ್ಟರ್ ನಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಕುಪ್ವಾರ ಮತ್ತು ಪೂಂಛ್ ಸೆಕ್ಟರ್ ಪ್ರದೇಶದ ಗಡಿನಿಯಂತ್ರಣ ರೇಖೆ ಸಮೀಪ ಭಾರತೀಯ ಸೇನೆಯ ಪ್ರತಿದಾಳಿಗೆ ಪಾಕ್ ನ ಮೂರು ಶಿಬಿರಗಳು ಎರಡು ಬಂಕರ್ ಗಳು ನಾಶವಾಗಿರುವುದಾಗಿ ವರದಿ ವಿವರಿಸಿದೆ. ನಂತರ ಪಾಕಿಸ್ತಾನ ಸೇನಾಪಡೆ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿ ಸೆಕ್ಟರ್ ನಲ್ಲಿ ಜನವಸತಿ ಪ್ರದೇಶವನ್ನು ಗುರಿಯಾಗಿರಿಸಿಕೊಂಡು ದಾಳಿಯನ್ನು ಮುಂದುವರಿಸಿದ್ದು, ಇದರಿಂದ ಗಡಿಭಾಗದಲ್ಲಿ ಜನರು ಭಯಭೀತರಾಗಿರುವುದಾಗಿ ವರದಿ ಹೇಳಿದೆ.
ಗುರುವಾರ ಕುಪ್ವಾರ ಸೆಕ್ಟರ್ ನ ಲೀಪಾ ಕಣಿವೆ ಪ್ರದೇಶದ ಸುತ್ತಮುತ್ತ ಪಾಕಿಸ್ತಾನ ಪಡೆ ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಶೆಲ್, ಗುಂಡಿನ ದಾಳಿಯನ್ನು ಆರಂಭಿಸಿದ್ದವು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾಪಡೆ ಪ್ರತಿದಾಳಿ ನಡೆಸಿತ್ತು.
ಗುರುವಾರ ಪಾಕಿಸ್ತಾನ ಸೇನಾಪಡೆ ನಡೆಸಿದ ದಾಳಿಯಲ್ಲಿ ಭಾರತೀಯ ಸೇನಾ ಪಡೆಯ ಯೋಧ ಹುತಾತ್ಮನಾಗಿದ್ದು, ಜನವಸತಿ ಪ್ರದೇಶ ಗುರಿಯಾಗಿರಿಸಿ ನಡೆಸಿದ ದಾಳಿಯಲ್ಲಿ ಬಾರಾಮುಲ್ಲಾ ಉರಿ ಸೆಕ್ಟರ್ ನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.
Comments are closed.