ಔರಂಗಾಬಾದ್(ಡಿ.17): ಮಹಾರಾಷ್ಟ್ರದ ನಿರಾಶ್ರಿತ ಗರ್ಭಿಣಿ ಇತ್ತೀಚೆಗೆ ಕರ್ನಾಟಕದ ಕಬ್ಬಿನ ಹೊಲದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಆ ಹಸುಗೂಸು ಕೊನೆಯುಸಿರೆಳಿದಿತ್ತು. ಲೋಕವನ್ನು ನೋಡುವ ಮುನ್ನವೇ ಕಣ್ಣು ಮುಚ್ಚಿದ ಹಸುಗೂಸು ಆ ತಾಯಿಗೆ ಜನಿಸಿದ 17ನೇ ಮಗುವಾಗಿತ್ತು.
ನಿರಾಶ್ರಿತ ಮಹಿಳೆ ಹೆಸರು ಲಂಕಾಬಾಯಿ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾನ್ ತೆಹ್ಸಿಲ್ ಪ್ರದೇಶದ ನಿವಾಸಿ. ಹೊಟ್ಟೆಪಾಡಿಗಾಗಿ ದಿನಗೂಲಿ ಕೆಲಸ ಮಾಡಿಕೊಂಡಿದ್ದಾರೆ. ಈಕೆಗೆ 38 ವರ್ಷ ವಯಸ್ಸು. ಆದರೆ ಈಗಾಗಲೇ ಆ ಮಹಿಳೆ 20 ಬಾರಿ ಗರ್ಭಿಣಿಯಾಗಿದ್ದಾರೆ. ಸತ್ತ ಮಗು 17ನೇಯದ್ದು. ಸಂತ್ರಸ್ತೆಗೆ ಈಗಾಗಲೇ 11 ಮಕ್ಕಳಿದ್ದಾರೆ. ಅವರಲ್ಲಿ 9 ಹೆಣ್ಣು ಮಕ್ಕಳು. ಮಹಿಳೆಗೆ ಮೂರು ಬಾರಿ ಗರ್ಭಪಾತವಾಗಿದೆ. 5 ಮಕ್ಕಳು ಸಾವನ್ನಪ್ಪಿವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಬರಪೀಡಿತ ಬೀಡ್ ಜಿಲ್ಲೆಯ ಸಾವಿರಾರು ಪುರುಷರು ಮತ್ತು ಮಹಿಳೆಯರು ಬೆಳೆ ಕೊಯ್ಲು ಸಮಯದಲ್ಲಿ ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡಲು ಮಹಾರಾಷ್ಟ್ರದ ಇತರ ಭಾಗಗಳಿಗೆ ಮತ್ತು ಕರ್ನಾಟಕಕ್ಕೆ ವಲಸೆ ಹೋಗುತ್ತಾರೆ. ಹಾಗೆಯೇ ಕರ್ನಾಟಕಕ್ಕೆ ವಲಸೆ ಬಂದಿದ್ದ ಗರ್ಭಿಣಿ ಲಂಕಾಬಾಯಿ ತನ್ನ 17ನೇ ಮಗುವಿಗೆ ಜನ್ಮ ನೀಡಿದ್ದು ಬೆಳಗಾವಿ ಜಿಲ್ಲೆಯ ಕಬ್ಬಿನ ಗದ್ದೆಯೊಂದರಲ್ಲಿ.
“ಲಂಕಾಬಾಯಿ 17ನೇ ಮಗುವಿಗೆ ಜನ್ಮ ನೀಡಿದ್ದು, ಸ್ವಲ್ಪ ಸಮಯದ ಬಳಿಕ ಆ ಹೆಣ್ಣು ಮಗು ಸಾವನ್ನಪ್ಪಿದೆ. ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ,” ಎಂದು ಬೀಡ್ ಜಿಲ್ಲೆಯ ಆರೋಗ್ಯಾಧಿಕಾರಿ ಡಾ.ಆರ್.ಬಿ.ಪವಾರ್ ತಿಳಿಸಿದ್ಧಾರೆ.
ಅಲೆಮಾರಿ ಗೋಪಾಲ ಸಮುದಾಯಕ್ಕೆ ಸೇರಿದ ನಿರಾಶ್ರಿತ ಮಹಿಳೆ 20ನೇ ಬಾರಿ ಗರ್ಭವತಿಯಾಗಿರುವುದು ಸೆಪ್ಟೆಂಬರ್ನಲ್ಲಿ ಆರೋಗ್ಯಾಧಿಕಾರಿಗಳ ಗಮನಕ್ಕೆ ಬಂದಿದೆ. ಆಕೆ ಸೆ.8ರಂದು ಪ್ರಾಥಮಿಕ ತಪಾಸಣೆ ಮಾಡಿಸಲು ಬಂದಿದ್ದಾಗ ವಿಷಯ ತಿಳಿದಿದೆ. ಆರೋಗ್ಯಾಧಿಕಾರಿಗಳ ತಂಡವು ನವೆಂಬರ್ 21ರಂದು ಲಂಕಾಬಾಯಿ ಮನೆಗೆ ತೆರಳಿದ್ದರು. ಆದರೆ ಆಕೆ ಕರ್ನಾಟಕಕ್ಕೆ ತೆರಳಿದ್ದರು ಎಂದು ಆರ್.ಬಿ.ಪವಾರ್ ಹೇಳಿದ್ದಾರೆ.
Comments are closed.