ರಾಷ್ಟ್ರೀಯ

ಕೇಜ್ರಿವಾಲ್ ಗೆಲುವಿಗೆ ಪ್ರಶಾಂತ್ ಕಿಶೋರ್ ರಣತಂತ್ರ

Pinterest LinkedIn Tumblr


ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (AAP) ಮತದಾನ ಅಭಿಯಾನವನ್ನು ನಿರ್ವಹಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚುನಾವಣಾ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್(Prashant Kishor) ಅವರ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐಪಿಎಸಿ) ಜೊತೆ ಕೈಜೋಡಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ದೆಹಲಿ ವಿಧಾನಸಭಾ ಚುನಾವಣೆಗೆ ಹೋಗಲಿದ್ದು, 2020 ರ ಫೆಬ್ರವರಿ 14 ರೊಳಗೆ ಚುನಾವಣೆ ಪೂರ್ಣಗೊಳ್ಳಬೇಕಿರುವುದರಿಂದ ಶೀಘ್ರದಲ್ಲೇ ಚುನಾವಣಾ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.

ಪ್ರಶಾಂತ್ ಕಿಶೋರ್ ಅವರ ಸಲಹಾ ಸಂಸ್ಥೆಯೊಂದಿಗಿನ ಪಾಲುದಾರಿಕೆಯನ್ನು ಪ್ರಕಟಿಸಿದ ಅರವಿಂದ್ ಕೇಜ್ರಿವಾಲ್(Arvind Kejriwal), “ಇಂಡಿಯನ್ ಪಿಎಸಿ ನಮ್ಮೊಂದಿಗೆ ಬರುತ್ತಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ” ಎಂದು ಶನಿವಾರ ಟ್ವೀಟ್ ಮಾಡಿದ್ದಾರೆ.

“ಪಂಜಾಬ್ ಫಲಿತಾಂಶಗಳ ನಂತರ, ನಾವು ನಿಮ್ಮನ್ನು ಕಠಿಣ ಎದುರಾಳಿ ಎಂದು ಒಪ್ಪಿಕೊಂಡಿದ್ದೇವೆ. ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದೊಂದಿಗೆ ಈಗ ಸೇರ್ಪಡೆಗೊಳ್ಳಲು ಸಂತೋಷವಾಗಿದೆ” ಎಂದು ಸಂಸ್ಥೆಯು ತಿಳಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಅವರ ಎಎಪಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗಳಿಸಿತ್ತು.

ಕಿಶೋರ್ ಬಿಹಾರದ ನಿತೀಶ್ ಕುಮಾರ್ ಅವರ ಜನತಾದಳ (ಯುನೈಟೆಡ್) ಉಪಾಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ನಂತರ ಅವರು 2015 ರಲ್ಲಿ ಜೆಡಿಯುಗೆ ಸೇರಿದರು. ಜೆಡಿಯು ಕೇಂದ್ರದಲ್ಲಿ ಮತ್ತು ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದೆ.

ಆದಾಗ್ಯೂ, 2019 ರ ಪೌರತ್ವ ತಿದ್ದುಪಡಿ ಮಸೂದೆಗೆ ಬಿಹಾರ ಮುಖ್ಯಮಂತ್ರಿ ಬೆಂಬಲ ನೀಡುತ್ತಿರುವ ಬಗ್ಗೆ ಕಿಶೋರ್ ಮತ್ತು ನಿತೀಶ್ ಕುಮಾರ್ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎಂಬ ವರದಿಗಳಿವೆ.

ಏತನ್ಮಧ್ಯೆ, ಈ ಹಿಂದೆ, 2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ, 2017 ರಲ್ಲಿ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರ ಗೆಲುವು ಮತ್ತು ಇತ್ತೀಚೆಗೆ, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಅದ್ಭುತ ಗೆಲುವು ದಾಖಲಿಸಿದ ಕೀರ್ತಿಗೆ ಕಿಶೋರ್ ಪಾತ್ರರಾಗಿದ್ದಾರೆ. ಆದರೆ, 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಜೊತೆಗಿನ ರಾಜಕೀಯ ತಂತ್ರಜ್ಞರ ಒಡನಾಟವು ಯಾವುದೇ ಪ್ರಯೋಜನವಾಗಲಿಲ್ಲ.

ಕಿಶೋರ್ ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ.

Comments are closed.