ನವದೆಹಲಿ: “ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ…?” ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ.
ಯಾವ ಕೋರ್ಟ್ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ ನನ್ನನ್ನು ಮುಟ್ಟಲಾರರು ಎಂದಿದ್ದಾನೆ.
ಅಹಮದಾಬಾದ್ ಅಪಹರಣ ಮತ್ತು ಅತ್ಯಾಚಾರ ಪ್ರಕರಣವೊಂದರಲ್ಲಿ ಗುಜರಾತ್ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಆದರೆ ಅಪರಿಚತ ಸ್ಥಳದಿಂದಲೇ ಈ ವಿಡಿಯೋ ಬಿಡುಗಡೆಯಾಗಿದ್ದು, ನಿತ್ಯಾನಂದ ಭಕ್ತರನ್ನು ಉದ್ದೇಶಿಸಿ ಮಾತಾಡಿದ್ದಾನೆ. ನೀವು ನನ್ನ ಬಳಿ ಇದ್ದು ನಿಮ್ಮ ನಿಷ್ಠೆಯನ್ನು ತೋರಿದ್ದೀರಿ. ನಾನು ನಿಮಗೆ ಭರವಸೆ ನೀಡುತ್ತೇನೆ. ನಿಮಗೆ ಸಾವು ಬರುವುದಿಲ್ಲ ಎಂದಿದ್ದಾನೆ.
ಇತ್ತೀಚೆಗೆ ನಿತ್ಯಾನಂದ ನಮ್ಮ ದೇಶ ಎಂದರೆ ಅದು ದೊಡ್ಡ ಹಿಂದು ರಾಷ್ಟ್ರ. ಅದರ ಹೆಸರು ಕೈಲಾಸ, ಅದಕ್ಕೆ ಗಡಿಗಳಿಲ್ಲ ಎಂದು ತನ್ನ ವೆಬ್ಸೈಟ್ನಲ್ಲಿ ನೀಡಿದ್ದ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.
ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿಯ ಪಾಸ್ಪೋರ್ಟ್ ಅರ್ಜಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿತ್ತು. ವಿದೇಶದಲ್ಲಿ ನಿತ್ಯಾನಂದನ ಚಲನವಲನಗಳು ಮತ್ತು ಆತನ ಪೋಸ್ಟ್ಗಳನ್ನು ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ, ನ್ಯಾಯಾಲಯದ ಶಿಕ್ಷೆಯಿಂದ ಬಚಾವಾಗಲು ಪಾಸ್ಪೋರ್ಟ್ ಇಲ್ಲದೆ ದೇಶ ತೊರೆದಿದ್ದಾನೆ. ದಕ್ಷಿಣ ಅಮೆರಿಕದ ರಾಷ್ಟ್ರ ಈಕ್ವೆಡಾರ್ಗೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ದಕ್ಷಿಣ ಅಮೆರಿಕ ಈ ಮಾತನ್ನು ತಳ್ಳಿ ಹಾಕಿದೆ.
Comments are closed.