ಭೋಪಾಲ್: ಕಾಂಗ್ರೆಸ್ ಮಾಜಿ ಶಾಸಕಿ ಶಕುಂತಲಾ ಖತಿಕ್ ಅವರಿಗೆ ಮಧ್ಯ ಪ್ರದೇಶದ ಭೋಪಾಲ್ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೇರಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕಿ ಶಕುಂತಲಾ ಖತಿಕ್ ಅವರು ಮತ್ತು ಅವರ ಬೆಂಬಲಿಗರಾದ ಏಳು ಜನರಿಗೆ ಪೊಲೀಸ್ ಠಾಣೆಯನ್ನು ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
2017 ರಲ್ಲಿ ಮಾಂಡ್ಸೌರ್ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಈ ಹತ್ಯೆಯ ವಿರೋಧಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಶಕುಂತಲಾ ಖತಿಕ್ ಅವರು, ಪ್ರತಿಭಟನೆಯ ವೇಳೆ ಪೊಲೀಸ್ ಠಾಣೆಯನ್ನು ಸುಟ್ಟು ಹಾಕಿ ಎಂದು ಘೋಷಣೆ ಕೂಗಿದ್ದರು. ಈ ಕಾರಣದಿಂದ ಭೋಪಾಲ್ ನ್ಯಾಯಾಲಯ ಮೂರು ವರ್ಷ ಜೈಲು ಮತ್ತು ಮಾಜಿ ಶಾಸಕಿ ಸೇರಿ ಎಲ್ಲಾ ಆರೋಪಿಗಳಿಗೂ 5 ಸಾವಿರ ದಂಡ ವಿಧಿಸಿದೆ.
2017ರಲ್ಲಿ ರೈತರ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿ ಶಕುಂತಲಾ ಖತಿಕ್ ಅವರು ರೈತರ ಜೊತೆ ಸೇರಿ ಪೊಲೀಸ್ ಠಾಣೆಯ ಮುಂದೆ ಉಗ್ರ ಹೋರಾಟ ಮಾಡಿದ್ದರು. ಈ ವೇಳೆ ಪೊಲೀಸ್ ಠಾಣೆಗೆ ಬೆಂಕಿ ಹಾಕಿ ಎಂಬ ಘೋಷಣೆಯನ್ನು ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ಅಧಾರದ ಮೇಲೆ ಅವರ ವಿರುದ್ಧ ಕೇಸ್ ದಾಖಲಾಗಿತ್ತು.
ಈಗ ಈ ಪ್ರಕರಣದಲ್ಲಿ ಶಕುಂತಲಾ ಖತಿಕ್ ಸೇರಿ ಅವರ ಬೆಂಬಲಿಗರಾದ ವಿನಾಸ್ ಗೋಯೆಲ್, ದೀಪಕ್ ಸೇಠ್, ನಾರಾಯಣ್, ಬಂಟಿ ಅಲಿಯಾಸ್ ಸಂಜಯ್, ಸತೀಶ್ ವರ್ಮಾ, ಮತ್ತು ಮನೀಶ್ ಖತಿಕ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಖತಿಕ್ ಅವರಿಗೆ ಒಂದು ತಿಂಗಳ ಕಾಲವಾಕಾಶ ನೀಡಲಾಗಿದೆ.
Comments are closed.