ರಾಷ್ಟ್ರೀಯ

ಸುಪ್ರೀಂ ಸಪ್ತ ಸದಸ್ಯ ಪೀಠಕ್ಕೆ ಶಬರಿಮಲೆ ಜೊತೆ ಮಸೀದಿ, ಪಾರ್ಸಿ ಮಂದಿರ ಪ್ರಕರಣಗಳು ವರ್ಗಾವಣೆ

Pinterest LinkedIn Tumblr


ಹೊಸದಿಲ್ಲಿ: ಶಬರಿಮಲೆ ದೇವಾಲಯಕ್ಕೆ ಮಹಿಳೆಯ ಪ್ರವೇಶ ನಿರ್ಬಂಧ ಪ್ರಕರಣದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್‌ ಪಂಚಸದಸ್ಯ ಪೀಠ, ಪ್ರಕರಣವನ್ನು 7 ಸದಸ್ಯರ ಪೀಠಕ್ಕೆ ವರ್ಗಾಯಿಸಿದೆ.

ಯಾವುದೇ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರನ್ನು ನಿಷೇಧಿಸಿರುವ ಹಾಗೂ ಮಹಿಳೆಯರಿಗೆ ಯಾವುದೇ ರೀತಿಯ ತಾರತಮ್ಯ ನಡೆಯುತ್ತಿರುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ 7 ಸದಸ್ಯರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ನ್ಯಾಯಪೀಠದ 5 ಜನ ಸದಸ್ಯರು 3:2 ಅನುಪಾತದಲ್ಲಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

ಕೇರಳದ ಶಬರಿಮಲೆ ದೇವಾಲಯ ಪ್ರಕರಣವಷ್ಟೇ ಅಲ್ಲದೆ ಹಲವಾರು ಪ್ರಕರಣಗಳನ್ನು ನೂತನ ಪೀಠಕ್ಕೆ ವರ್ಗಾಯಿಸಲಾಗಿದೆ. ಮುಸ್ಲಿಮರ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶಕ್ಕಿರುವ ನಿಷೇಧ. ಪಾರ್ಸಿಗಳ ದೇವಾಲಯಗಳಿಗೆ ಮಹಿಳೆಯರ ಪ್ರವೇಶ ನಿಷೇಧ ಹಾಗೂ ದಾವೋಡಿ ಬೋಹ್ರಾ ಸಮುದಾಯದ ಹೆಣ್ಣುಮಕ್ಕಳ ಪ್ರಜನನ ಅಂಗವನ್ನು ಛೇದಗೊಳಿಸುವ ಕುರಿತ ಪ್ರಕರಣ ಸೇರಿದಂತೆ ಹೆಣ್ಣುಮಕ್ಕಳ ಮೇಲಿನ ದಬ್ಬಾಳಿಕೆ ಕುರಿತ ಪ್ರಕರಣಗಳನ್ನು ಈ ನ್ಯಾಯಪೀಠ ವಿಚಾರಣೆ ನಡೆಸಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಮಹಿಳೆಯರಿಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್‌ 2018ರ ಸೆಪ್ಟೆಂಬರ್‌ನಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು. ಸಂವಿಧಾನದ 14ನೇ ವಿಧಿಯಲ್ಲಿ ಸಮಾನತೆ ಪ್ರತಿಪಾದಿಸಲಾಗಿದ್ದು, 26ನೇ ವಿಧಿಯಲ್ಲಿ ಪುರುಷರ ಜತೆಗೆ ಮಹಿಳೆಗೂ ಧಾರ್ವಿುಕ ಆಚರಣೆಯ ಹಕ್ಕು ನೀಡಲಾಗಿದೆ. ಹಿಂದು ಧರ್ಮದಲ್ಲಿ ಮಹಿಳೆಯರಿಗೆ ಎಲ್ಲಿಯು ಧಾರ್ವಿುಕ ಬಹಿಷ್ಕಾರಕ್ಕೆ ಅವಕಾಶವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಶುಕ್ರವಾರ 4:1 ರ ಅನುಪಾತದಲ್ಲಿ ತೀರ್ಪು ನೀಡಿತ್ತು.

ಆದರೆ, ಸುಪ್ರೀಂಕೋರ್ಟ್ ಆದೇಶದಿಂದ ಶಬರಿಮಲೆ ಭಕ್ತರ ನಂಬಿಕೆಗೆ ಘಾಸಿಯಾಗಿದೆ ಎಂದು ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿ, ಸುಪ್ರೀಂಕೋರ್ಟ್ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪಂಚಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದ್ದು, ಫೆಬ್ರವರಿ 6ರಂದು ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ಈ ಕುರಿತು ತೀರ್ಪು ಪ್ರಕಟಿಸಿದ್ದು, ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ 7 ಸದಸ್ಯರ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ.

Comments are closed.