ರಾಷ್ಟ್ರೀಯ

ಇಬ್ಬರನ್ನು ಪ್ರೀತಿಸಬೇಡ ಎಂದು ಬುದ್ಧಿಮಾತು ಹೇಳಿದ ಅಮ್ಮನನ್ನೇ ಹತ್ಯೆ ಮಾಡಿದ ಪುತ್ರಿ

Pinterest LinkedIn Tumblr


ಹೈದರಾಬಾದ್: ಇಬ್ಬರನ್ನು ಪ್ರೀತಿಸಬೇಡ ಎಂದು ಬುದ್ಧಿಮಾತು ಹೇಳಿದ ತಾಯಿಯನ್ನೇ ಮಗಳು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

ರಜಿತಾ(38) ಕೊಲೆಯಾದ ತಾಯಿಯಾಗಿದ್ದು, ಕೀರ್ತಿ ಕೊಲೆ ಮಾಡಿದ ಆರೋಪಿ. ರಾಮನ್ನಪೇಟೆ ನಿವಾಸಿ ಶ್ರೀನಿವಾಸ್ ರೆಡ್ಡಿ ಕೆಲವು ದಿನಗಳಿಂದ ತನ್ನ ಪತ್ನಿ ರಜಿತಾ ಹಾಗೂ ಮಗಳು ಕೀರ್ತಿ ಜೊತೆ ಮುನಗನೂರಿನಲ್ಲಿ ವಾಸಿಸುತ್ತಿದ್ದರು. ಶ್ರೀನಿವಾಸ್ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ರಜಿತಾ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಳು.

ತನ್ನ ಮಗಳು ಇಬ್ಬರು ಯುವಕರನ್ನು ಪ್ರೀತಿಸುತ್ತಿರುವ ವಿಷಯ ರಜಿತಾಗೆ ತಿಳಿಯಿತು. ಆಗ ಆಕೆ ತನ್ನ ಮಗಳಿಗೆ ಈ ರೀತಿ ಮಾಡದಂತೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಕೀರ್ತಿ ತಂದೆ ಕೆಲಸಕ್ಕೆ ಹೋದ ಸಮಯದಲ್ಲಿ ತಾಯಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಳು.

ಕೀರ್ತಿ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ಬಳಿಕ ಮೂರು ದಿನ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡು ಅಲ್ಲೇ ತನ್ನ ಪ್ರಿಯಕರನ ಜೊತೆ ವಾಸಿಸುತ್ತಿದ್ದಳು. ಬಳಿಕ ಮೃತದೇಹದ ವಾಸನೆ ಬರುತ್ತಿರುವುದನ್ನು ಕಂಡು ಮೃತದೇಹವನ್ನು ರಾಮನ್ನಪೇಟೆ ರೈಲ್ವೆ ಹಳಿ ಮೇಲೆ ಎಸೆದಿದ್ದಳು.

ಇದಾದ ಬಳಿಕ ಕೀರ್ತಿ ತನ್ನ ತಂದೆ ಬಳಿ ವಿಶಾಖಪಟ್ಟಣಂ ಪ್ರವಾಸ ಹೋಗುವುದಾಗಿ ಹೇಳಿ ಮನೆಯ ಹಿಂದಿನ ರಸ್ತೆಯಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ಪ್ರೇಮಿ ಜೊತೆ ವಾಸಿಸುತ್ತಿದ್ದಳು. ಈ ನಡುವೆ ಆಕೆ ಪೊಲೀಸ್ ಠಾಣೆಗೆ ಹೋಗಿ, ನನ್ನ ತಾಯಿ ಕಾಣೆಯಾಗಿದ್ದಾರೆ. ಕೆಲವು ದಿನಗಳಿಂದ ನನ್ನ ತಂದೆ-ತಾಯಿ ಜಗಳವಾಡುತ್ತಿದ್ದರು ಎಂದು ದೂರು ದಾಖಲಿಸಿದ್ದಳು.

ಕೆಲಸ ಮುಗಿಸಿ ಬಂದಾಗ ರಜಿತಾ ಕಾಣೆಯಾಗಿರುವುದನ್ನು ನೋಡಿ ಕೀರ್ತಿಯನ್ನು ಪ್ರಶ್ನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀನಿವಾಸ್ ರೆಡ್ಡಿ ದೂರಿನ ಮೇರೆಗೆ, ಕೀರ್ತಿ ತನ್ನ ಪ್ರಿಯಕರನ ಜೊತೆ ಸೇರಿ ತಾಯಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ವಿಚಾರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.

Comments are closed.