ಉತ್ತರಪ್ರದೇಶ: ಅವಧಿಗೂ ಮುನ್ನ ಜನಿಸಿದ್ದ ನವಜಾತ ಹೆಣ್ಣು ಮಗು ಸಾವನ್ನಪ್ಪಿದ್ದ ಬಳಿಕ ಶವವನ್ನು ಹೂಳಲು ಹೋದ ತಂದೆಗೆ ಮಣ್ಣಿನ ಮಡಿಕೆಯೊಳಗೆ ಹೆಣ್ಣು ಮಗುವೊಂದು ಸಿಕ್ಕಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಹಿತೇಶ್ ಕುಮಾರ್ ಸಿರೋಹಿ ಎಂಬ ವ್ಯಾಪಾರಿಯ ಪತ್ನಿ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಮಗು ಜನಿಸಿದ ಕೆಲವೇ ಹೊತ್ತಿನಲ್ಲಿ ಸಾವನ್ನಪ್ಪಿತ್ತು. ಬಳಿಕ ಮಗುವಿನ ಶವವನ್ನು ಹೂತು ವಾಪಸ್ ಬರುವಾಗ ಸಮೀಪದಲ್ಲಿಯೇ ಸಣ್ಣ ಹೊಂಡ ತೋಡಿ ಇಟ್ಟಿದ್ದ ಮಣ್ಣಿನ ಮಡಕೆಯೊಂದು ಸಿಕ್ಕಿದ್ದು, ಅದನ್ನು ಹೊರ ತೆಗೆದು ನೋಡಿದಾಗ ಅದರೊಳಗೆ ಹೆಣ್ಣು ಮಗು ಇದ್ದಿರುವುದನ್ನು ಗಮನಿಸಿರುವುದಾಗಿ ಸಿರೋಹಿ ತಿಳಿಸಿದ್ದಾರೆ.
ಮಗು ಜೀವಂತವಾಗಿದ್ದು, ಉಸಿರಾಡುತ್ತಿತ್ತು. ಹಿತೇಶ್ ಕೂಡಲೇ ಹತ್ತಿಯಲ್ಲಿ ಹಾಲನ್ನು ಅದ್ದಿ ಮಗುವಿಗೆ ಉಣಿಸಿದ್ದರು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿ ವಿವರಿಸಿದೆ. ಮಗು ಆರೋಗ್ಯವಾಗಿದ್ದು, ಮಗುವಿನ ತಾಯಿಯನ್ನು ಪತ್ತೆ ಹಚ್ಚಲು ಯತ್ನಿಸುತ್ತಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ಸಿಂಗ್ ತಿಳಿಸಿದ್ದಾರೆ.
ಹಿತೇಶ್ ಕುಮಾರ್ ಪತ್ನಿ ವೈಶಾಲಿ ಬರೇಲಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿರೋಹಿ ಪತ್ನಿ ವೈಶಾಲಿ ಅವಧಿಗೂ ಮುನ್ನ(7ತಿಂಗಳು)ವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
Comments are closed.