ರಾಷ್ಟ್ರೀಯ

ಚಂದ್ರನಲ್ಲಿಗೆ ಉಪಗ್ರಹ ಕಳಿಸಿದರೆ ದೇಶದಲ್ಲಿರುವ ಬಡವರ, ಯುವಕರ ಹೊಟ್ಟೆ ತುಂಬುತ್ತಾ: ರಾಹುಲ್

Pinterest LinkedIn Tumblr


ಲಾತೂರ್: ಚಂದ್ರನಲ್ಲಿಗೆ ಉಪಗ್ರಹ ಕಳಿಸಿದರೆ ದೇಶದಲ್ಲಿರುವ ಬಡವರ, ಯುವಕರ ಹೊಟ್ಟೆ ತುಂಬುತ್ತಾ? ಹೀಗೆಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ. ಲಾತೂರ್ ನಲ್ಲಿ ನಡೆದ ವಿಧಾನಸಭಾ ಚುನಾವಣಾ ಜಾಥಾದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ಪರೋಕ್ಷವಾಗಿ ಚಂದ್ರಯಾನ 2ನ್ನು ಟೀಕಿಸಿದರು.

ನೈಜ ಸಮಸ್ಯೆಗಳನ್ನು ಕೇಂದ್ರ ಸರಕಾರ ಮರೆಮಾಚುತ್ತಿದೆ. ಯುವಕರು ಉದ್ಯೋಗ ಎಲ್ಲಿ ಎಂದು ಕೇಳಿದರೆ, ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರನ ಕಡೆಗೆ ಕೈತೋರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ದೇಶದ ಆರ್ಥಿಕತೆ ಕುಸಿಯುತ್ತಿದೆ, ಬಿಜೆಪಿ ಸರಕಾರ ಒಡೆದು ಆಳುವ ನೀತಿ ಅನುಸರಿಸುತ್ತದೆ. ಇದರಿಂದಾಗಿ ಕೈಗಾರಿಕೆಗಳು ಮುಚ್ಚುತ್ತಿದ್ದು, ಜನರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.

ದೇಶ ತೀರ ಸಂಕಷ್ಟದ ದಿನಗಳನ್ನು ನೋಡುತ್ತಿದ್ದರೆ, ಅಮಿತ್ ಶಾ ಮತ್ತು ಮೋದಿ ಅವರು ಜನರನ್ನು ಕಾರ್ಬೆಟ್ ಪಾರ್ಕ್, ಚಂದ್ರ, ಚೀನ, ಪಾಕಿಸ್ಥಾನ, ಜಪಾನ್, ಕೊರಿಯಾ ಎಂದು ಹೇಳುತ್ತಿದ್ದಾರೆ. ಕಳೆದ 40 ವರ್ಷಗಳಲ್ಲೇ ನಿರುದ್ಯೋಗ ಅತಿ ಹೆಚ್ಚಿನ ಮಟ್ಟಕ್ಕೆ ತಲುಪಿದೆ. ದೇಶದಲ್ಲಿ 2 ಸಾವಿರ ಫ್ಯಾಕ್ಟರಿಗಳು ಬಂದ್ ಗಿವೆ. ಆಟೋಮೊಬೈಲ್ ಕ್ಷೇತ್ರ ಸಂಪೂರ್ಣ ಕುಸಿದಿದೆ ಎಂದು ಹೇಳಿದರು.

ಅಲ್ಲದೇ ಕೇಂದ್ರ ಸರಕಾರ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದು, 15 ಶ್ರೀಮಂತರ 5.5 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ಆದರೆ ಇದನ್ನು ಮಾಧ್ಯಮಗಳು ತೋರಿಸುತ್ತಿಲ್ಲ. ಅವುಗಳನ್ನು ಅದೇ ಉದ್ಯಮಿಗಳ ಒಡೆತನದಲ್ಲಿವೆ.

ನರೇಗಾ ಯೋಜನೆಗೆ ಕೇವಲ 35 ಸಾವಿರ ಕೋಟಿ ಅಗತ್ಯವಿದ್ದು, ಅದನ್ನು ಮಾತ್ರ ಸರಕಾರಕ್ಕೆ ಕೊಡಲಾಗುತ್ತಿಲ್ಲ. ರೈತರು ಸಾಲ ಮರುಪಾವತಿಗೆ ವಿಫ‌ಲರಾದರೆ ಜೈಲಿಗೆ ದೂಡಲಾಗುತ್ತದೆ. ಜಿ.ಎಸ್.ಟಿ., ನೋಟ್ ಬ್ಯಾನ್ ನಿಂದಾಗಿ ಬಡವರಿಗೆ ಇನ್ನಿಲ್ಲದಂತೆ ಕಷ್ಟವಾಗಿದೆ ಎಂದು ಹೇಳಿದರು.

Comments are closed.