ರಾಷ್ಟ್ರೀಯ

ಚಿನ್ಮಾಯನಂದ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆಯ ಬಂಧನಕ್ಕೆ ತಡೆ

Pinterest LinkedIn Tumblr


ಲಖನೌ: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ್ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಕಾನೂನು ವಿದ್ಯಾರ್ಥಿನಿಯ ಬಂಧನಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ತಡೆಯಾಜ್ಞೆ ನೀಡಿದ್ದಾರೆ.

ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಬೆದರಿಕೆ ಹಾಗೂ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಂತ್ರಸ್ತ ಕಾನೂನು ವಿದ್ಯಾರ್ಥಿನಿಯನ್ನು ಬಂಧಿಸಿದ್ದರು. ಆದರೆ ಸೆಪ್ಟೆಂಬರ್ 26ರ ವರೆಗೆ ವಿದ್ಯಾರ್ಥಿನಿ ಬಂಧನಕ್ಕೆ ಕೋರ್ಟ್ ತಡೆ ನೀಡಿದೆ. ಇದಕ್ಕು ಮುನ್ನ ಇದೇ ಕೋರ್ಟ್ ಸ್ವಾಮಿ ಚಿನ್ಮಯಾನಂದ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಚಿನ್ಮಯಾನಂದ್ ಅವರು ತಮ್ಮ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಯುವತಿ ಹಾಗೂ ಇತರೆ ಮೂವರು ವಿರುದ್ಧ ಪ್ರತಿ ದೂರು ದಾಖಲಿಸಿದ್ದು, ಅವರು ತನಗೆ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿದ್ದಾರೆ.

ಚಿನ್ಮಯಾನಂದ್ ದೂರಿನ ಆಧಾರದ ಮೇಲೆ ಎಸ್ಐಟಿ ಅಧಿಕಾರಿಗಳು ಯುವತಿ ಹಾಗೂ ಇತರೆ ಮೂವರು ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಗಾಗಿ ಕಾನೂನು ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದಿತ್ತು.

ಸುಲಿಗೆ ಪ್ರಕರಣದಲ್ಲಿ ವಿದ್ಯಾರ್ಥಿನಿ ಭಾಗಿಯಾಗಿರುವುದು ಪತ್ತೆಯಾಗಿದೆ. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು ಎಂದು ಎಸ್ಐಟಿ ಮುಖ್ಯಸ್ಥ ಐಜಿ ನವೀನ್ ಅರೋರಾ ಅವರು ತಿಳಿಸಿದ್ದಾರೆ.

ಮೂವರು ಯುವಕರು ಆಕೆಯ ಸಂಬಂಧಿಕರಾಗಿದ್ದು, ಅವರನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಐಸ್ ಐಟಿ ಅಧಿಕಾರಿಗಳು ಮೂವರು ಯುವಕರು ಹಾಗೂ ಯುವತಿಯನ್ನು ಮುಖಾಮುಖಿ ಮಾಡಿ ವಿಚಾರಣೆ ನಡೆಸಲು ಮುಂದಾಗಿತ್ತು.

ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ಅವರು ಒಂದು ವರ್ಷಗಳ ಕಾಲ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಶೆಹಜಾನ್ಪುರದ ಕಾನೂನು ವಿದ್ಯಾರ್ಥಿನಿ ಆರೋಪಿಸಿದ್ದರು. ಈ ಸಂಬಂಧ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿ, ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಿದ ನಂತರ ಆರೋಪಿ ಚಿನ್ಮಯಾನಂದ್ ಅವರನ್ನು ಎಸ್ಐಟಿ ಅಧಿಕಾರಿಗಳು ಕಳೆದ ಶುಕ್ರವಾರ ಬಂಧಿಸಿದ್ದರು. ಬಳಿಕ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments are closed.