
ನವದೆಹಲಿ: ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿಯ ವಿಶೇಷ ಪೊಲೀಸ್ ತಂಡ ಬಂಧಿಸಿರುವ ಘಟನೆ ನಡೆದಿದೆ.
ಪ್ರೇಯಸಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ಚಾಕುವಿನಿಂದ ತುಂಡು ತುಂಡು ಮಾಡಿ ಕಾಲುವೆಗೆ ಎಸೆದಿದ್ದು, ಮೃತದೇಹ ಗುರುತಿಸಲಾಗಷ್ಟು ಹಾನಿಯಾಗಿದೆ ಎಂದು ಹೇಳಲಾಗಿದೆ.
ಆರೋಪಿಯನ್ನು 32 ವರ್ಷದ ಮಹಮ್ಮದ್ ಅಯೂಬ್ ವಿಕ್ಕಿ ಎಂದು ಗುರುತಿಸಲಾಗಿದ್ದು, ಈತ ಟರ್ಕ್ಮ್ಯಾನ್ ಗೇಟ್ನ ನಿವಾಸಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಆರೋಪಿ ಅಯೂಬ್ ಸಂತ್ರಸ್ತೆ ಲತಾ ಅಲಿಯಾಸ್ ಸಲ್ಮಾಳನ್ನು ಜಿ.ಬಿ.ರಸ್ತೆಯಲ್ಲಿರುವ ವೇಶ್ಯಾಗೃಹದಲ್ಲಿ ಭೇಟಿ ಮಾಡಿದ್ದ. 2008ರಲ್ಲಿ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿರುವ ಅಯೂಬ್ ಲತಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಪರಸ್ಪರ ಡೇಟಿಂಗ್ ನಡೆಸಿದ ನಾಲ್ಕು ವರ್ಷಗಳ ಬಳಿಕ ವೇಶ್ಯೆ ವೃತ್ತಿಯನ್ನು ತ್ಯಜಿಸಿ, ತನ್ನೊಂದಿಗೆ ಜೀವಿಸುವಂತೆ ಒತ್ತಾಯ ಮಾಡಿದ್ದ. ಅಲ್ಲದೆ, ಮದುವೆ ಆಗುವಂತೆಯೂ ಕೇಳಿಕೊಂಡಿದ್ದ. ಆದರೆ, ಇದಕ್ಕೆ ಲತಾ ನಿರಾಕರಿಸಿದಾಗ ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದ ಎಂದು ಹೇಳಲಾಗಿದೆ.
ಆಗಸ್ಟ್ 20ರಂದು ಅಯೂಬ್ ಸಂಜೆ ಹೊರಗೆ ಹೋಗಿ ಬರೋಣ ಎಂದು ಲತಾಳನ್ನು ಕೇಳಿದ್ದಾನೆ. ಇದಕ್ಕೆ ಲತಾ ಒಪ್ಪಿದ್ದಕ್ಕೆ ಸ್ಕೂಟಿಯೊಂದನ್ನು ಬಾಡಿಗೆಗೆ ಪಡೆದು, ಚಾಕುವೊಂದನ್ನು ಮರೆಮಾಚಿಟ್ಟುಕೊಂಡು ಬಂದು ಲತಾಳನ್ನು ಕರೆದೊಯ್ದಿದ್ದಾನೆ. ಬಳಿಕ ಆಕೆಯನ್ನು ಬವಾನಾ ಕಾಲುವೆ ಬಳಿ ಕರೆದೊಯ್ದು, ಕೆಲ ಕಾಲ ಸಂಚು ರೂಪಿಸಿ, ಅವಕಾಶ ನೋಡಿಕೊಂಡು ಲತಾಳ ಕತ್ತನ್ನು ಕುಯ್ದಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಗುರುತಿಸಬಾರದೆಂದು ದೇಹವನ್ನು ಐದು ತುಂಡುಗಳನ್ನಾಗಿ ಮಾಡಿ ಕಾಲುವೆಗೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುಂಡಾಗಿ ವಿಕಾರವಾಗಿದ್ದ ಮೃತದೇಹವು ಬವಾನಾ ಕಾಲುವೆಯ ಬಳಿ ಕೊಲೆಯಾದ ಮರುದಿನ ದೊರಕಿದೆ. ದೇಹಕ್ಕೆ ಸಾಕಷ್ಟು ಬಾರಿ ಚಾಕುವಿನಿಂದ ಚುಚ್ಚಿದ್ದರಿಂದ ಹಾಗೂ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾದ್ದರಿಂದ ಗುರುತಿಸಲಾಗದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆಗಸ್ಟ್ 30 ರಂದು ದೆಹಲಿ ವಿಶೇಷ ಪೊಲೀಸ್ ತಂಡ ಅಯೂಬ್ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಆಗಲೇ ದೆಹಲಿ ಬಿಡಲು ಪ್ರಯತ್ನಿಸಿದ್ದ ಅಯೂಬ್ನನ್ನು ಟರ್ಕ್ಮ್ಯಾನ್ ಗೇಟ್ ಬಳಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಬಿಟ್ಟು ಬೇರೆ ಕಡೆ ನೆಲಸಲು ಅಯೂಬ್ ಯೋಜನೆ ರೂಪಿಸಿದ್ದ ಎನ್ನಲಾಗಿದೆ.
Comments are closed.