ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಮುಂದೂಡಿದ್ದು, ಈ ಅರ್ಜಿಗೆ ಯಾವ ಅರ್ಥವೂ ಇಲ್ಲ ಎಂದು ಸಿಜೆಐ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ವಕೀಲ, ಸಾಮಾಜಿಕ ಕಾರ್ಯಕರ್ತ ಎಂಎಲ್ ಶರ್ಮಾ ಅವರು ತಿದ್ದುಪಡಿ ಮಾಡಿದ ಹೊಸ ಅರ್ಜಿಯನ್ನು ಮತ್ತೊಮ್ಮೆ ಸುಪ್ರೀಂಕೋರ್ಟ್ ಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
“ಯಾವ ವಿಧದ ಅರ್ಜಿ ಇದು? ಯಾವುದನ್ನು ಪ್ರಶ್ನಿಸುತ್ತಿದ್ದೀರಿ? ನಿಮ್ಮ ಬೇಡಿಕೆ ಏನು ಎಂದು ದೂರುದಾರ ಎಂಎಲ್ ಶರ್ಮಾ ಅವರನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಪ್ರಶ್ನಿಸಿದ್ದರು. ನಾನು ನಿಮ್ಮ ಅರ್ಜಿಯನ್ನು ಅರ್ಧ ಗಂಟೆ ಕಾಲ ಓದಿದ್ದೇನೆ. ನನಗೇನೂ ಅರ್ಥವಾಗಲಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರು.
ಜಮ್ಮು-ಕಾಶ್ಮೀರದಲ್ಲಿ ವಿಧಿಸಿರುವ ಎಲ್ಲಾ ನಿರ್ಬಂಧಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಕಾಶ್ಮೀರ ಟೈಮ್ಸ್ ಸಂಪಾದಕಿ ಹಾಗೂ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ವಕೀಲ ಎಂಎಲ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನ ಸಿಜೆಐ ರಂಜನ್ ಗೊಗೊಯಿ, ಜಸ್ಟೀಸ್ ಎಸ್ ಎ ಬೋಬ್ಡೆ ಮತ್ತು ಜಸ್ಟೀಸ್ ಎಸ್ ಎ ನಝೀರ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು.
Comments are closed.