ರಾಷ್ಟ್ರೀಯ

ದೇವಸ್ಥಾನಕ್ಕೆ ಭೇಟಿ ನೀಡಿ ಪತ್ನಿಯನ್ನು ಪರ್ವತದಿಂದ ತಳ್ಳಿ ಕೊಲೆ ಮಾಡಿದ ಪತಿ !

Pinterest LinkedIn Tumblr

ಮುಂಬೈ: ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪತಿಯೊಬ್ಬ ಪತ್ನಿಯನ್ನು ಪರ್ವತದಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ.

ಕವಿತಾ (22) ಮೃತ ಮಹಿಳೆ. ಆರೋಪಿ ಪತಿಯನ್ನು ಬಾಬುಲಾಲ್ ಕೇಲ್ ಎಂದು ಗುರುತಿಸಲಾಗಿದ್ದು, ಈತ ತನ್ನ ಪತ್ನಿ ಕವಿತಾಳನ್ನು ಪ್ರಸಿದ್ಧ ಸಪ್ತಶೃಂಗಿ ದೇವಾಲಯ ಇರುವ ನಂದೂರಿ ಪರ್ವತ ಶಿಖರದಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿ ಮೂಲತಃ ಮಧ್ಯಪ್ರದೇಶದವರಾಗಿದ್ದು, ಭಾನುವಾರ ಕಲ್ವಾನ್‍ಗೆ ಆಗಮಿಸಿದ್ದರು. ಇಬ್ಬರು ಹೋಟೆಲ್‍ನಲ್ಲಿ ಉಳಿದುಕೊಂಡಿದ್ದು, ಇಂದು ಸಪ್ತಶೃಂಗಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದುಕೊಂಡು ಬಳಿಕ ಸಮೀಪದ ಶೀಟ್ಕಾಡ ಶಿಖರಕ್ಕೆ ಹೋಗಿದ್ದರು. ಅಲ್ಲಿ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ. ಇದರಿಂದ ಕೋಪಗೊಂಡ ಪತಿ ಕೇಲ್ ಕವಿತಾಳನ್ನು ಕಣಿವೆಯಲ್ಲಿ ತಳ್ಳಿದ್ದಾನೆ ಎಂದು ಪೊಲೀಸ್ ಅಧಿಕಾರಿ ಪ್ರಮೋದ್ ವಾಘ್ ಹೇಳಿದ್ದಾರೆ.

ಶಿಖರದ ಸಮೀಪದಲ್ಲಿ ನಿಂತಿದ್ದ ಹಣ್ಣಿನ ವ್ಯಾಪಾರಿ ಕೇಲ್ ತನ್ನ ಪತ್ನಿಯನ್ನು ಕಣಿವೆಯಲ್ಲಿ ತಳ್ಳುವುದನ್ನು ನೋಡಿದ್ದಾನೆ. ತಕ್ಷಣ ಇತರ ಯಾತ್ರಾರ್ಥಿಗಳಿಗೆ ಎಚ್ಚರಿಕೆ ನೀಡಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಕವಿತಾಳ ಮೃತದೇಹವನ್ನು ಕಣಿವೆಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.