ಭುವನೇಶ್ವರ್: ಅಪ್ರಾಪ್ತೆಯ ಮೇಲೆ ನಾಲ್ವರು ಪೊಲೀಸ್ ಅಧಿಕಾರಿಗಳು ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ.
ಜಾರ್ಸಗುಡಾದ ಪೊಲೀಸರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ದೂರಿದ್ದಾಳೆ. ಪ್ರವಾಸಕ್ಕೆಂದು ಕರೆದುಕೊಂಡು ಬಂದಿದ್ದ ಗೆಳೆಯ ಪರಾರಿಯಾಗಿದ್ದಾನೆ.
ಆಗಿದ್ದೇನು?:
ಸಂತ್ರಸ್ತೆ ಗೆಳೆಯ ರವಿ ಜೊತೆಗೆ ಪ್ರವಾಸಕ್ಕೆಂದು ಹೋಗಿದ್ದರು. ಹೀಗಾಗಿ ಜಾರ್ಸಗುಡಾದ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಕರ್ತವ್ಯನಿರತ ಹಾಗೂ ಸಮವಸ್ತ್ರದ ಧರಿಸಿದ್ದ ನಾಲ್ವರು ಪೊಲೀಸರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆಯಿಂದಾಗಿ ರವಿ ಕೂಡ ಗಾಬರಿಗೊಂಡಿದ್ದ.
ಪೊಲೀಸರು ಬಾಲಕಿಯ ಮೇಲೆ ನಿರಂತರವಾಗಿ 8 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 8ನೇ ದಿನ ರವಿ ಬಾಲಕಿಯನ್ನು ಹೋಟೆಲ್ ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿಂದ ಜಾರ್ಖಂಡಿನ ಜುಗ್ಸಾಲೈ ನಗರದ ಹೋಟೆಲ್ಗೆ ಬಂದಿದ್ದಾನೆ. ಆದರೆ ರೂಮ್ನಲ್ಲಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.
ಬಾಲಕಿ ಕಣ್ಣು ತೆರೆದು ನೋಡಿದಾಗ ರವಿ ಸ್ಥಳದಲ್ಲಿ ಇರಲಿಲ್ಲ. ಇದರಿಂದ ಗಾಬರಿಗೊಂಡ ಬಾಲಕಿ ಹೋಟೆಲ್ ಮಾಲೀಕರ ಬಳಿ ಅಳಲು ತೋಡಿಕೊಂಡಿದ್ದಾಳೆ. ಇದಕ್ಕೆ ಸ್ಪಂದಿಸಿದ ಮಾಲೀಕ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ.
ಸಂತ್ರಸ್ತೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಜುಗ್ಸಾಲೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
Comments are closed.