ದೆಹಲಿ: ಫನಿ ಚಂಡಮಾರುತದ ಆರಂಭಿಕ ಎಂಟ್ರಿಯಿಂದ ಕರ್ನಾಟಕ ಸೇರಿ ಹಲವು ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ಮೇ.3ರ ಶುಕ್ರವಾರದಂದು ಫನಿ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ತಿಳಿದುಬಂದಿದೆ. ಫನಿ ಸೈಕ್ಲೋನ್ ಅತ್ಯಂತ ಭೀಕರ ಸ್ವರೂಪದಲ್ಲಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಮೇಲೆ ಅಪ್ಪಳಿಸುವ ಸಾಧ್ಯತೆ ಇದ್ದ ಫನಿ ಚಂಡಮಾರುತ, ಮೊನ್ನೆ ತನ್ನ ದಿಕ್ಕು ಬದಲಿಸಿ ಬಂಗಾಳಕೊಲ್ಲಿ ಮಾರ್ಗವಾಗಿ ಒಡಿಸ್ಸಾ ಕರಾವಳಿಯತ್ತ ನುಗ್ಗಿದೆ. ಇದೀಗ ತೀವ್ರ ಸ್ವರೂಪ ಪಡೆಯಲಿರುವ ಫನಿ ಚಂಡಮಾರುತ ಒಡಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ರಣ ಭೀಕರ ಮಳೆ ಉಂಟು ಮಾಡಲಿದೆ ಎಂದು ತಿಳಿದುಬಂದಿದೆ. ಫನಿ ಚಂಡಮಾರುತ 195 ರಿಂದ 200 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದಿಂದ ಮುಂಗಡ ಪರಿಹಾರ
ಇನ್ನು ಫನಿ ಚಂಡಮಾರುತದ ಭೀಕರತೆ ಹಿನ್ನಲೆ ಮುನ್ನೆಚ್ಚರಿಕ ಕ್ರಮವಾಗಿ ಕೇಂದ್ರ ಸರ್ಕಾರ 1,086 ಕೋಟಿ ರೂಪಾಯಿ ರಿಲೀಸ್ ಮಾಡಿದೆ. ಅಲ್ಲದೇ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಿದೆ. ಇತ್ತ ಎನ್ಡಿಆರ್ಫ್ ತನ್ನ 41 ತಂಡಗಳನ್ನ ಒಡಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಿದೆ. ವಾಯು ಸೇನೆ ಕೂಡ ರಕ್ಷಣೆಗೆ ಬೇಕಾಗುವ ಹೆಲಿಕಾಪ್ಟರ್ಗಳನ್ನ ಸನ್ನದ್ದ ಸ್ಥಿತಿಯಲ್ಲಿಟ್ಟಿದೆ. ಎಲ್ಲಾ ರೀತಿಯಲ್ಲೂ ಫನಿ ಚಂಡಮಾರುತದಿಂದಾಗುವ ಅವಘಡಗಳನ್ನ ಎದುರಿಸಲು ತಯಾರಿ ನಡೆಸಲಾಗಿದೆ.
Comments are closed.