ರಾಷ್ಟ್ರೀಯ

ಅಯೋಧ್ಯೆ ರಾಮ ಮಂದಿರ- ಬಾಬ್ರಿ ಮಸೀದಿ ಭೂ ವಿವಾದ: ‘ಸುಪ್ರೀಂ’ ನೇಮಿಸಿರುವ ಸಂಧಾನ ಸಮಿತಿಯಿಂದ ಮೊದಲ ಸಭೆ

Pinterest LinkedIn Tumblr

ನವದೆಹಲಿ: ಅಯೋಧ್ಯೆ ರಾಮ ಮಂದಿರ- ಬಾಬ್ರಿ ಮಸೀದಿ ಭೂ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಂಧಾನ ಸಮಿತಿ ಇಂದು ಮೊದಲ ಬಾರಿಗೆ ಸಭೆ ಸೇರುತ್ತಿದೆ.

ವಿವಾದಿತ ಭೂಮಿ ಇರುವ ಉತ್ತರ ಪ್ರದೇಶದ ಫೈಜಾಬಾದ್ ನ ಅಯೋಧ್ಯೆಯಲ್ಲೇ ಸುಪ್ರೀಂ ಕೋರ್ಟ್ ನೇಮಿತ ನಿವೃತ್ತ ನ್ಯಾಯಮೂರ್ತಿ ಖುಲೀಫುಲ್ಲಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಖಲೀಫುಲ್ಲಾ ಅವರ ಜೊತೆಗೆ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರು ಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಕಳೆದ ವಾರವಷ್ಟೇ ಅಯೋಧ್ಯ ಭೂ ವಿವಾದ ಸಂಬಂಧ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಸಂಧಾನದ ಮೂಲಕವೇ ವಿವಾದ ಬಗೆಹರಿಯಬೇಕು ಎಂದು ಹೇಳಿತ್ತು. ಅಲ್ಲದೆ ಇದಕ್ಕೆ ಸಂಧಾನ ಸಮಿತಿ ಕೂಡ ನೇಮಕ ಮಾಡಿ ಕೆಲ ಷರತ್ತುಗಳನ್ನೂ ಕೂಡ ವಿಧಿಸಿತ್ತು. ಪ್ರಮುಖವಾಗಿ ಯಾವುದೇ ಕಾರಣಕ್ಕೂ ಸಂಧಾನ ಪ್ರಕ್ರಿಯೆಯನ್ನು ಮಾಧ್ಯಮಗಳು ವರದಿ ಮಾಡಬಾರದು ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರು, ಈ ಸಂಬಂಧ ಸಂಧಾನಕಾರರು ಎಚ್ಚರದಿಂದರಿಬೇಕು ಎಂದು ಹೇಳಿದೆ. ಅಲ್ಲದೆ ಸಂಧಾನ ಪ್ರಕ್ರಿಯೆಯ ಎಲ್ಲ ಮಾಹಿತಿಗಳೂ ಗೌಪ್ಯವಾಗಿರಬೇಕಿದ್ದು, ಈ ಕುರಿತು ಸಂಪೂರ್ಣ ಜವಾಬ್ದಾರಿ ಸಂಧಾನ ಸಮಿತಿಯದ್ದೇ ಆಗಿರುತ್ತದೆ ಎಂದೂ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಸಂವಿಧಾನಿಕ ಪೀಠ ಹೇಳಿದೆ.

ಅಲ್ಲದೆ ಸಂಧಾನ ಸಮಿತಿಗೆ ಸಂಧಾನಕ್ಕಾಗಿ ಪೀಠ 8 ವಾರಗಳ ಕಾಲಾವಕಾಶ ನೀಡಿದ್ದು, ಇಂದಿನಿಂದ ಒಂದು ವಾರದೊಳಗೆ ಸಂಧಾನ ಪ್ರಕ್ರಿಯೆ ಆರಂಭಿಸಬೇಕು, 4 ವಾರಗಳೊಳಗೆ ಕೋರ್ಟ್ ಸಂಧಾನ ಪ್ರಕ್ರಿಯೆಯ ಪ್ರಗತಿ ವರದಿ ಸಲ್ಲಿಕೆ ಮಾಡಬೇಕು ಮತ್ತು 8 ವಾರಗಳೊಳಗೆ ಇಡೀ ಸಂಧಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದೂ ಪೀಠ ಸಂಧಾನ ಸಮಿತಿಗೆ ಸೂಚಿಸಿದೆ.

ವಿವಾದಿತ ಪ್ರದೇಶ ಫೈಜಾಬಾದ್ ನಲ್ಲೇ ಸಂಧಾನ
ಇನ್ನು ಇಡೀ ಪ್ರಕರಣದ ಕೇಂದ್ರ ಬಿಂದು ಮತ್ತು ವಿವಾದಿತ ಪ್ರದೇಶವಿರುವ ಫೈಜಾಬಾದ್ ನಲ್ಲೇ ಸಂಧಾನ ಪ್ರಕ್ರಿಯೆ ನಡೆಯಬೇಕು ಎಂದೂ ಪೀಠ ಹೇಳಿದ್ದು, ಸಂಪೂರ್ಣ ಸಂಧಾನ ಪ್ರಕ್ರಿಯೆಯನ್ನು ಕ್ಯಾಮೆರಾದಲ್ಲಿ ದಾಖಲಿಸಬೇಕು ಎಂದು ಹೇಳಿತ್ತು.

Comments are closed.