ನವದೆಹಲಿ: ಪುಲ್ವಾಮಾ ದಾಳಿಯ ಪ್ರತಿಕಾರ ತೀರಿಸಿಕೊಂಡ ಹಿನ್ನಲೆಯಲ್ಲಿ ದೇಶವ್ಯಾಪಿ ಸಂತೋಷ ಮನೆ ಮಾಡಿದೆ. ಕೆಲವರು ಪಟಾಕಿ ಸಿಡಿಸಿ, ಸ್ವೀಟ್ ಹಂಚಿ ಸರ್ಜಿಕಲ್ ಸ್ಟ್ರೈಕ್ 2 ಅನ್ನು ಸಂಭ್ರಮಿಸಿದ್ದಾರೆ. ಆದರೆ ದೆಹಲಿಯ ಆಟೋ ಡ್ರೈವರ್ ಒಬ್ಬರು ವಿನೂತನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.
ಆಟೋ ಚಾಲಕ ಮನೋಜ್ ಅವರು ಫೆಬ್ರವರಿ 26ರಂದು (ಮಂಗಳವಾರ) ತಮ್ಮ ಆಟೋದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರಿಗೆಲ್ಲ ಉಚಿತವಾಗಿ ಸೇವೆ ಒದಗಿಸಿದ್ದಾರೆ. ಜೊತೆಗೆ ತಮ್ಮ ಆಟೋದಲ್ಲಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಹಾಗೂ ಭಾರತೀಯ ವಾಯು ಪಡೆ ಇಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್ 2 ನಿಂದಾಗಿ ಎಲ್ಲರಿಗೂ ಉಚಿತ ಪ್ರಯಾಣ ಎಂದು ಬ್ಯಾನರ್ ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮನೋಜ್ ಅವರು, ಉಚಿತ ಆಟೋ ಸೇವೆಗಿಂತ ಹೆಚ್ಚೇನೂ ಮಾಡಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನನ್ನ ಆಟೋದಲ್ಲಿ ಮಂಗಳವಾರ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಯಾವುದೇ ರೀತಿ ದರ ವಿಧಿಸುತ್ತಿಲ್ಲ. ಇದು ನನಗೆ ಹೆಚ್ಚು ಖುಷಿ ತಂದಿದೆ ಎಂದು ಹೇಳಿದ್ದಾರೆ.
ಭಾರತೀಯ ವಾಯು ಪಡೆ ಮಂಗಳವಾರ ಮುಂಜಾನೆ 3.45ರ ಸುಮಾರಿಗೆ ಮೊದಲು ಬಾಲಕೋಟ್ ಮೇಲೆ ದಾಳಿ ಮಾಡಿತ್ತು. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿತ್ತು. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ಮಾಡಿದೆ.
Comments are closed.