ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಇಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದು, ಕಾಲ್ನಡಿಗೆ ಮೂಲಕವೇ ತಿರುಪತಿ ಬೆಟ್ಟವನ್ನು ಹತ್ತಿದ್ದಾರೆ. 110 ನಿಮಿಷಗಳಲ್ಲಿ 11 ಕಿಲೋ ಮೀಟರ್, 3550 ಮೆಟ್ಟಿಲು ಹತ್ತಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಇದನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮುಖೇನ ತಿಳಿಸಿದ್ದು, ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದಂತೆಯೇ ಮತ್ತೆ ರಾಹುಲ್ ಗಾಂಧೀ ಅವರು ಟೆಂಪಲ್ ರನ್ ಶುರು ಮಾಡಿದ್ದಾರೆ. ಇಂದು ತಿರುಪತಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ಕಾಲ್ನಡಿಗೆ ಮೂಲಕವೇ ಬೆಟ್ಟ ಹತ್ತಿದ್ದರು. ಎಲ್ಲಿಯೂ ನಿಲ್ಲದೇ ಕೇವಲ 110 ನಿಮಿಷಗಳಲ್ಲಿ 11 ಕಿ.ಲೋ ಮೀಟರ್ ದೂರದಲ್ಲಿದ್ದ ದೇವಸ್ಥಾನಕ್ಕೆ ಕ್ರಮಿಸಿದರು.
ಮೊದಲಿಗೆ ಆಂಧ್ರಪ್ರದೇಶಕ್ಕೆ ಬಂದಿಳಿದ ರಾಹುಲ್ ಗಾಂಧಿ ಅವರಿಗೆ ಟಿಟಿಡಿ (ಟಿರುಮಲ ತಿರುಪತಿ ದೇವಸ್ಥಾನ) ಸದಸ್ಯರು ಭರ್ಜರಿ ಸ್ವಾಗತ ಕೋರಿದ್ದಾರೆ. ಬಳಿಕ ತುಸು ದಣಿದಿದ್ದ ಇವರು, ಟಿಡಿಪಿ ಅತಿಥಿ ಗೃಹದಲ್ಲಿಯೇ ಕೂತು ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದಾರೆ. ನಂತರವೇ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳಿದ್ದಾರೆ.
ರಾಹುಲ್ ಕೇವಲ 110 ನಿಮಿಷಗಳಲ್ಲಿ ಬೆಟ್ಟವನ್ನು ಏರಿದ್ದಾರೆ. ಅಲಿಪಿರಿಯಲ್ಲಿ ಬೆಟ್ಟವೇರಲು ಶುರು ಮಾಡಿದ ರಾಹುಲ್ ನಡೆದುಕೊಂಡೇ ದೇವಸ್ಥಾನದ ತುದಿ ತಲುಪಿದ್ದಾರೆ. ಬಳಿಕ ಅಲ್ಲಿಮ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿಯವರಿಗೆ ಅಲ್ಲಿನ ಅರ್ಚಕರು ಪವಿತ್ರ ರೇಷ್ಮೆ ವಸ್ತ್ರ, ಪ್ರಸಾದ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ ಎನ್ನಲಾಗಿದೆ.
ಇನ್ನು ರಾಹುಲ್ ಆಗಮನದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಭಾರೀ ಬಿಗಿ ಪೋಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ದೇವರ ದರ್ಶನ ಪಡೆದ ರಾಹುಲ್, ಅಲ್ಲಿಯೇ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶ ಉದ್ದೇಶಿಸಿ ಮಾತನಾಡಿದ್ಧಾರೆ ಎಂದು ತಿಳಿದು ಬಂದಿದೆ.
Comments are closed.