ರಾಷ್ಟ್ರೀಯ

ಗಡಿ ನುಸುಳಲು ಯತ್ನ: ಪಾಕ್‌ ಯೋಧರನ್ನು ಹೊಡೆದುರುಳಿಸಿದ ಭಾರತ

Pinterest LinkedIn Tumblr


ಶ್ರೀನಗರ: ಭಾರಿ ವಿಧ್ವಂಸಕ ಸಂಚಿನೊಂದಿಗೆ ಗಡಿ ನುಸುಳಿ ಬಂದಿದ್ದ ಪಾಕಿಸ್ತಾನದ ಬಾರ್ಡರ್‌ ಆ್ಯಕ್ಷನ್‌ ಟೀಮ್‌ (ಬ್ಯಾಟ್‌)ನ ಶಂಕಿತ ಯೋಧರಿಬ್ಬರನ್ನು ಭಾರತೀಯ ಸೇನಾ ಪಡೆ ದಿಟ್ಟ ಕಾರ್ಯಾಚರಣೆ ಮೂಲಕ ಹೊಡೆದುರುಳಿಸಿದೆ.

ಜಮ್ಮು-ಕಾಶ್ಮೀರದ ನೌಗಾಮ್‌ ಸೆಕ್ಟರ್‌ನ ಗಡಿ ಭಾಗದಲ್ಲಿ ಭಾನುವಾರ ರಾತ್ರಿ ರಕ್ತ ಹೆಪ್ಪುಗಟ್ಟಿಸುವ ಚಳಿಯಲ್ಲಿ ಈ ಘಟನೆ ನಡೆದಿದೆ. ಇದರೊಂದಿಗೆ ವರ್ಷಾರಂಭದಲ್ಲಿ ಭಾರತದಲ್ಲಿ ಘಟಿಸಬಹುದಾಗಿದ್ದ ದೊಡ್ಡ ಗಂಡಾಂತರವೊಂದು ತಪ್ಪಿದಂತಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ಗುಂಡಿನ ಸುರಿಮಳೆ: ಗಡಿ ಭಾಗಕ್ಕೆ ಹೊಂದಿಕೊಂಡ ದಟ್ಟಾರಣ್ಯವನ್ನು ಒಳನುಸುಳಿಕೆಗೆ ಆಯ್ಕೆಕೊಂಡ ಪಾಕ್‌ ಯೋಧರು, ಗುಂಡಿನ ಸುರಿಮಳೆಯೊಂದಿಗೆ ಒಳ ಬರಲು ಯತ್ನಿಸಿದರು. ಮಾರ್ಟರ್‌ ಸೆಲ್‌ ಮತ್ತು ರಾಕೆಟ್‌ ಉಡಾವಣೆ ಮೂಲಕ ಪಾಕ್‌ ಸೇನೆ ತನ್ನ ಯೋಧರ ದುಷ್ಕೃತ್ಯಕ್ಕೆ ಸಹಕರಿಸಿತು. ಆದರೆ, ಈ ಬೆಳವಣಿಗೆಯನ್ನು ಆರಂಭದಲ್ಲಿಯೇ ಗುರುತಿಸಿದ ಭಾರತೀಯ ಯೋಧರು ತಕ್ಷಣದ ಕಾರ್ಯಾಚರಣೆ ನಡೆಸಿದರು. ಗುಂಡಿಗೆ ಪ್ರತಿಗುಂಡು ಹಾರಿಸಿದರು. ಪರಸ್ಪರ ರಾಕೆಟ್‌ಗಳ ಉಡಾವಣೆಯಾದವು. ಗಡಿ ಭಾಗ ಇಡೀ ರಾತ್ರಿ ಕದನ ಕಣವಾಗಿ ಪರಿಣಮಿಸಿತು. ಅಂತಿಮವಾಗಿ ಪಾಕ್‌ ಪಡೆಗಳು ಪಲಾಯನಗೈದವು. ಆ ವೇಳೆಗಾಗಲೇ ಒಳ ನುಸುಳಿ ಬಂದಿದ್ದವರ ಪೈಕಿ ಇಬ್ಬರನ್ನು ಕೊಂದ ಹಾಕಲಾಯಿತು ಎಂದು ವಕ್ತಾರರು ವಿವರಿಸಿದ್ದಾರೆ.

ಹತ್ಯೆಯಾದ ಪಾಕಿಸ್ತಾನಿಗಳ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಅವರು ಬ್ಯಾಟ್‌ನ ಸದಸ್ಯರಾಗಿರುವ ಸಾಧ್ಯತೆ ಇದೆ. ಮೃತರ ಬಳಿ ಯುದ್ಧ ಬಳಕೆಗೆ ನೆರವಾಗಬಲ್ಲ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇವರ ಜತೆ ನುಸುಳಿರಬಹುದಾದ ಇತರೆ ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಸೇನೆ ಸಮವಸ್ತ್ರ:

ನುಸುಳುಕೋರರು ಪಾಕ್‌ ಸೇನೆ ಸಮವಸ್ತ್ರ ಧರಿಸಿದ್ದರು. ಪಾಕಿಸ್ತಾನಿ ಮುದ್ರೆ ಇರುವ ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದರು. ಕೆಲವರು ಭಾರತೀಯ ಯೋಧರನ್ನು ವಂಚಿಸುವ ಹುನ್ನಾರವಾಗಿ ಬಿಎಸ್‌ಎಫ್‌ನ ಹಳೆ ಮಾದರಿಯ ಸಮವಸ್ತ್ರ ತೊಟ್ಟಿದ್ದರು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ನುಸುಳಿಕೋರರ ಸಕಾಲ

ಮೈಕೊರೆಯುವ ಚಳಿ, ದಟ್ಟ ಮಂಜು ಮತ್ತು ಹೊಸ ವರ್ಷ ಬರ ಮಾಡಿಕೊಳ್ಳುವ ಭಾರತೀಯ ಯೋಧರ ಸಂಭ್ರಮ, ಈ ಮೂರರ ಮಿಶ್ರಣವನ್ನು ಪಾಕ್‌ ಪಾತಕಿಗಳು ಇದುವರೆಗೆ ಗಡಿ ನುಸುಳಲು ತಕ್ಕ ಸಮಯವನ್ನಾಗಿ ಬಳಸಿಕೊಳ್ಳುತ್ತ ಬಂದಿದ್ದಾರೆ. ಹಿಂದಿನ ವರ್ಷಗಳಲ್ಲಿ ನಡೆದ ಇಂತಹ ದುಸ್ಸಾಹಸಗಳನ್ನು ಗಮನದಲ್ಲಿಟ್ಟುಕೊಂಡಿದ್ದ ಬಿಎಸ್‌ಎಫ್‌ ಯೋಧರು, ಈ ಬಾರಿ ವಿಶೇಷ ನಿಗಾ ವಹಿಸಿ ಕಾಯ್ದಿದ್ದರು. ಯೋಧರ ಈ ಪ್ರಯತ್ನ ಈ ಬಾರಿ ದುರಂತ ತಪ್ಪಿಸಲು ನೆರವಾಯಿತು.

Comments are closed.