
ಕಲಬುರಗಿ: ಬಲಗೈ ಇಲ್ಲವೇ ಎಡಗೈಯಿಂದ ಬರೆಯುವುದನ್ನು ನೋಡಿದ್ದೇವೆ. ಆದರೆ ಇಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳು ಎರಡು ಕೈಗಳಿಂದ ಸರಾಗವಾಗಿ ಕನ್ನಡ-ಇಂಗ್ಲಿಷ್ ಎರಡನ್ನೂ ಬರೆಯುತ್ತಾರೆ!
ಕಲಬುರಗಿ-ಬೀದರ್ ರಾಷ್ಟ್ರೀಯ ಹೆದ್ದಾರಿಗೆ ಸನಿಹದಲ್ಲಿರುವ ಉಪಳಾಂವ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ ವಿದ್ಯಾರ್ಥಿಗಳೇ ಈ ಅಸಾಧಾರಣ ಸಾಧನೆ ಮಾಡುತ್ತಿರುವುದು. ಒಂದು ಕೈನಲ್ಲಿ ಅ ಆ ಇ ಈ ಬರೆಯಲು ಶುರು ಮಾಡಿದರೆ, ಮತ್ತೂಂದು ಕೈನಿಂದ ಎ ಬಿ ಸಿ ಡಿ ಬರೆಯುತ್ತಾರೆ. ವಿಶೇಷವೆಂದರೆ ಒಂದರಿಂದ ಎಂಟನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳೂ ಈ ಕೌಶಲ್ಯ ಪ್ರದರ್ಶಿಸುತ್ತಾರೆ.
ಎರಡೂ ಕೈಗಳಿಂದ ಬರೆಯುವ ಕೌಶಲ್ಯ ಹೊಂದಿರುವ ಮಕ್ಕಳಲ್ಲಿನ ಕೌಶಲ್ಯ ವೃದ್ಧಿ, ನೆನಪಿನ ಶಕ್ತಿ ಹೆಚ್ಚಳ ಮತ್ತು ಯಾವ ನಿಟ್ಟಿನಲ್ಲಿ ಅಭ್ಯಾಸಕ್ಕೆ ಪೂರಕವಾಗುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ಸಂಶೋಧನೆ ಮಾಡಲು ಕೇಂದ್ರ ಸರ್ಕಾರದ ಅಣು ವಿಜ್ಞಾನ ಮತ್ತು ಗಣಿತ ಕೇಂದ್ರದಡಿಯ ಮುಂಬೈ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನ ಹೋಮಿ ಬಾಬಾ ವಿಜ್ಞಾನ ಶಿಕ್ಷಣ ಕೇಂದ್ರದ ನಾಲ್ವರ ಸಂಶೋಧನಾ ತಂಡ ಶಾಲೆಗೆ ಆಗಮಿಸಿದೆ.
ತಂಡವು ಶಾಲೆ ಶಿಕ್ಷಕರನ್ನು ಸಂದರ್ಶಿಸಿ ಎರಡೂ ಕೈಗಳಿಂದ ಬರೆಯುವ ರೂಢಿ ಕಲಿಸಿದ ಬಗೆ, ಕಲಿತ ಮೇಲೆ ಮಕ್ಕಳಲ್ಲಿ ಕಂಡ ಸಾಧನೆ, ನೆನಪಿನ ಶಕ್ತಿ ಜತೆಗೆ ಓದಿನಲ್ಲಿ ಆಸಕ್ತಿ ಹೆಚ್ಚಿದೆಯೇ ಎಂಬುದನ್ನು ಒರೆಗಲ್ಲಿಗೆ ಹಚ್ಚಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಎರಡೂ ಕೈಗಳಿಂದ ಬರೆಯುವ ಕೌಶಲ್ಯ ಪರಿಶೀಲಿಸಿ 25ಕ್ಕೂ ಹೆಚ್ಚು ಪ್ರಶ್ನೆ ಕೇಳುವ ಮುಖಾಂತರ ವೈಜ್ಞಾನಿಕ ಸಂಶೋಧನಾ ವರದಿಗೆ ನಾಂದಿ ಹಾಡಿದೆ. ಒಟ್ಟು ಐದು ದಿನಗಳ ಕಾಲ ಎಲ್ಲ ಆಯಾಮಗಳಿಂದ ವರದಿ ರೂಪಿಸುತ್ತಿದೆ.
ದೇಶದಲ್ಲಿಯೇ ಎರಡನೇ ಶಾಲೆ:
ಮಧ್ಯಪ್ರದೇಶದ ಸಿಂಗ್ರಾಲಿ ಗ್ರಾಮದ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಬಿಟ್ಟರೆ, ಕಲಬುರಗಿ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯ ಮಕ್ಕಳೇ ಎರಡು ಕೈಗಳಲ್ಲಿ ಬರೆಯುವ ಕೌಶಲ್ಯ ಹೊಂದಿರುವುದು. ಈಗಾಗಲೇ ಸಿಂಗ್ರಾಲಿ ಶಾಲೆಗೆ ಹೋಮಿ ಬಾಬಾ ವಿಜ್ಞಾನ ಶಿಕ್ಷಣ ಕೇಂದ್ರದ ನಾಲ್ವರ ಸಂಶೋಧನಾ ತಂಡವೊಂದು ಭೇಟಿ ನೀಡಿ ವರದಿ ರೂಪಿಸಿದೆ.
ಸಂಶೋಧನಾ ವರದಿ ಮಂಡನೆ:
ಎರಡೂ ಕೈಗಳಿಂದ ಬರೆಯುವ ಕೌಶಲ್ಯದಿಂದ ಮಕ್ಕಳಲ್ಲಿ ಆಗುವ ಬೌದ್ಧಿಕ ಮಟ್ಟ ಹೆಚ್ಚಳ ಹಾಗೂ ಬದಲಾವಣೆಗಳ ಕುರಿತಾಗಿ ತಂಡವು ಸಂಶೋಧನಾ ವರದಿ ರೂಪಿಸಿ, ಅದನ್ನು ಶಿಕ್ಷಣ ಕೇಂದ್ರದ ಶೈಕ್ಷಣಿಕ ಪತ್ರಿಕೆಯಲ್ಲಿ ಪ್ರಕಟಿಸುವುದರ ಜತೆಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ತಮ್ಮ ಶಾಲೆ ವಿದ್ಯಾರ್ಥಿಗಳು ಎರಡೂ ಕೈಗಳಿಂದ ಬರೆಯುವ ಕೌಶಲ್ಯದ ಬೌದ್ಧಿಕ ಬೆಳವಣಿಗೆ ವೈಜ್ಞಾನಿಕವಾಗಿ ದೃಢಪಟ್ಟರೆ ಅದಕ್ಕಿಂತ ದೊಡ್ಡದು ತಮಗೇನು ಬೇಕಿಲ್ಲ ಎನ್ನುತ್ತಾರೆ ಶಾಲೆ ಸಂಸ್ಥಾಪಕ ಗೌಡೇಶ ಬಿರಾದಾರ.
ಜೋಪಡಿಯಲ್ಲಿ ನಡೆಯುವ ಶಾಲೆ
ದೊಡ್ಡದಾದ ಕಟ್ಟಡ, ಶುಲ್ಕ ಹೆಚ್ಚಳವಿದ್ದಲ್ಲಿ ಶಾಲೆ ಎನ್ನುವಂತಿರುವ ಈಗಿನ ಕಾಲದಲ್ಲಿ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ ತದ್ವಿರುದ್ಧವಾಗಿ ಜೋಪಡಿಯಲ್ಲಿ, ಪತ್ರಾಸದ ಕಟ್ಟಡದಲ್ಲಿ ನಡೆಯುತ್ತಿದೆ. ಶುಲ್ಕ ಇಲ್ಲವೇ ಇಲ್ಲ. ಕಲಿಕೆಯಲ್ಲಿ ವಿವಿಧ ವೈಶಿಷ್ಟÂತೆಗಳಿಂದ ಗುರುತಿಸಿಕೊಂಡಿದೆ. ಶಾಲೆ ಸಮೀಪದಲ್ಲೇ ದಾಲ್ಮಿಲ್ಗಳಿವೆ. ಈ ದಾಲ್ಮಿಲ್ಗಳಲ್ಲಿ ಕೆಲಸಕ್ಕೆಂದು ಗುಜರಾತ್, ಬಿಹಾರ ಸೇರಿದಂತೆ ಇತರ ರಾಜ್ಯಗಳಿಂದ ಕಾರ್ಮಿಕರು ಬಂದಿದ್ದು, ಇವರ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸವನ್ನೂ ಮಾಡಲಾಗುತ್ತಿದೆ.
ಎ ಫಾರ್ ಆ್ಯಪಲ್ ಅಲ್ಲ, ಅಮೆರಿಕಾ ಇಲ್ಲಿ ಎ ಫಾರ್ ಆ್ಯಪಲ್ ಅಲ್ಲ, ಇಲ್ಲೇನಿದ್ದರೂ ಎ ಫಾರ್ ಅಮೆರಿಕಾ… ಅಂದರೆ ಈ ಶಾಲೆಯಲ್ಲಿ ಕಲಿಯುವ ಮಕ್ಕಳು ರಾಜ್ಯದ ಎಲ್ಲ ಜಿಲ್ಲೆಗಳು, ದೇಶದ ಎಲ್ಲ ರಾಜ್ಯಗಳು, ವಿಶ್ವದ ಎಲ್ಲ ದೇಶಗಳ ಹೆಸರುಗಳನ್ನು ವಿಶಿಷ್ಟವಾಗಿ ಕಲಿಯುತ್ತವೆ. ಇದಲ್ಲದೇ ಶಾಲೆ ಕೈ ತೋಟದಲ್ಲಿ ಎಲ್ಲ ಬಗೆಯ ಬೆಳೆಗಳನ್ನು ಬೆಳೆಸಲಾಗುತ್ತಿದೆ. ಮೊಲ, ಗಿಳಿ ಸೇರಿದಂತೆ ಇತರ ಪ್ರಾಣಿಗಳನ್ನು ಸಾಕಿ ಅವುಗಳನ್ನು ನೇರವಾಗಿ ಪರಿಚಯಿಸುವ ಕಲಿಕಾ ಬೋಧನೆಯೂ ಮೆಚ್ಚುಗೆಗೆ ಪಾತ್ರವಾಗಿದೆ.
ಶಾಲೆಯಲ್ಲಿ ಎರಡೂ ಕೈಗಳಿಂದ ಬರೆಯುವುದನ್ನು ಅವಲೋಕಿಸಿ ಸಂಶೋಧನಾ ವರದಿ ರೂಪಿಸಿ ತಮ್ಮ ಕೇಂದ್ರದ ಮುಖ್ಯಸ್ಥರಿಗೆ ಸಲ್ಲಿಸಲಾಗುವುದು. ತದನಂತರ ಶೈಕ್ಷಣಿಕ ಪತ್ರಿಕೆಯಲ್ಲಿ ಪ್ರಕಟಿಸಿದ ನಂತರ ಇವರ ಕೌಶಲ್ಯವನ್ನು ವೈಜ್ಞಾನಿಕವಾಗಿ ದೃಢಪಡಿಸಲಾಗುತ್ತದೆ.
– ಬಿಸ್ವಜಿತ್ ಬೋಯಿತೇ, ಹೊಮಿ ಬಾಬಾ ವಿಜ್ಞಾನ ಶಿಕ್ಷಣ ಕೇಂದ್ರದ ಸಂಶೋಧನಾ ಅಭ್ಯರ್ಥಿ
– ಹಣಮಂತರಾವ ಭೈರಾಮಡಗಿ
Comments are closed.