ಹನುಮಾನ್ಗರ್ಹ್ (ರಾಜಸ್ತಾನ): ಕಾಂಗ್ರೆಸ್ ನಾಯಕರ ದೂರದೃಷ್ಟಿಯ ಕೊರತೆ ಇದ್ದ ಕಾರಣ ಇಂದು ಕರ್ತಾರ್ಪು ಸಾಹಿಬ್ ಗುರುದ್ವಾರ ಪಾಕಿಸ್ತಾನದಲ್ಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.
ರಾಜಸ್ಥಾನದ ಹನುಮಾನ್ಗರ್ಹ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ದ ತೀವ್ರವಾಗಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಸೂಕ್ಷ್ಮತೆ ಇಲ್ಲದಿರುವುದು ಹಾಗೂ ದೂರ ದೃಷ್ಟಿಯ ಕೊರತೆ ಇದ್ದ ಕಾರಣ ಕರ್ತಾರ್ಪುರ ಪಾಕಿಸ್ತಾನದ ಪಾಲಾಗಿದೆ ಎಂದು ಹೇಳಿದ್ದಾರೆ.
ಗುರು ನಾನಕ್ ದೇವ್ ಅವರ ಪ್ರಾಮುಖ್ಯತೆ ಬಗ್ಗೆ ಕಾಂಗ್ರೆಸ್’ಗೆ ಯಾವುದೇ ರೀತಿಯ ಕಲ್ಪನೆಗಳೂ ಕೂಡ ಇರಲಿಲ್ಲ. ಹೀಗಾಗಿಯೇ ಕರ್ತಾರ್ಪುರ ಪಾಕಿಸ್ತಾನದಲ್ಲಿದೆ ಎಂದು ತಿಳಿಸಿದ್ದಾರೆ.
ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಶಂಕು ಸ್ಥಾಪನಾ ಕಾರ್ಯಕ್ರಮಕ್ಕಾಗಿ ಭಾರತವನ್ನು ಪ್ರತಿನಿಧಿಸಲು ಪಾಕಿಸ್ತಾನಕ್ಕೆ ತೆರಳಿದ್ದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯವರು ಈ ಹಿಂದೆ ಹೇಳಿಕೆಯೊಂದನ್ನು ನೀಡಿದ್ದರು. ಹಲವು ವರ್ಷಗಳ ಹಿಂದೆಯೇ ಕರ್ತಾರ್ಪುರ ಕಾರಿಡಾರ್ ಯೋಜನೆ ಆಗಬೇಕಿತ್ತು. ಗಡಿ ರೇಖೆ ಹಾಕಿದ್ದ ವ್ಯಕ್ತಿ ಮೂಲಭೂತ ತಪ್ಪು ಮಾಡಿದ್ದ ಎಂದು ಹೇಳಿದ್ದರು.
Comments are closed.