ರಾಷ್ಟ್ರೀಯ

ಹಲ್ಲು ನೋವು: ದಂತ ವೈದ್ಯನಿಂದ ನಾಯಿಗೆ ರೂಟ್ ಕ್ಯಾನಲ್

Pinterest LinkedIn Tumblr


ನಾಗ್ಪುರ: ಹಲ್ಲು ಮುರಿದುಕೊಂಡು ನೋವಿನಿಂದ ಬಳಲುತ್ತಿದ್ದ ಬೀದಿನಾಯಿಯೊಂದರ ಸಂಕಟ ನೋಡಲಾಗದೆ, ಅದಕ್ಕೆ ರೂಟ್ ಕ್ಯಾನಲ್ ಸರ್ಜರಿ ಮಾಡಿಸುವ ಮೂಲಕ ನಗರದ ವೈದ್ಯರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಖಾಸಗಿ ವೈದ್ಯರಾಗಿರುವ ಡಾ. ರೋಷನ್ ಸಖಾರ್ಕರ್ ನವೆಂಬರ್ 1 ರಂದು ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಪ್ರಾಣಿ ಪ್ರೇಮಿಯಾಗಿರುವ ಡಾ. ಸಖಾರ್ಕರ್ ಪ್ರತಿದಿನ ಸುಮಾರು 30 ಬೀದಿನಾಯಿಗಳಿಗೆ ನಾಯಿಗಳಿಗೆ ಆಹಾರ ನೀಡುತ್ತಿದ್ದು, ಅವುಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಹಲ್ಲು ಮುರಿದುಕೊಂಡಿದ್ದ ಈ ನಾಯಿ ನೋವಿನಿಂದಾಗಿ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದುದು ಇತ್ತೀಚೆಗೆ ಸಖಾರ್ಕರ್ ಗಮನಕ್ಕೆ ಬಂದಿತ್ತು. ಅದಕ್ಕೆ ತುರ್ತಾಗಿ ರೂಟ್ ಕ್ಯಾನಲ್ ಚಿಕಿತ್ಸೆಯ ಅವಶ್ಯಕತೆ ಇತ್ತು.

ಸರ್ಜರಿ ಬಳಿಕ, ವೈದ್ಯರ ನಿಗಾವಣೆಯಲ್ಲಿರುವ ನಾಯಿ ಈಗ ಆರೋಗ್ಯದಿಂದಿದ್ದು, ಶಾಂತವಾಗಿದೆ ಎಂದು ಅವರು ಹೇಳಿದ್ದಾರೆ.

ಪಶುವೈದ್ಯರಾದ ಡಾ. ಅಶೀಶ್ ಮತ್ತು ಡಾ. ಸ್ವಪ್ನಿಲ್ ಸಹಯೋಗದಲ್ಲಿ ಈ ಸರ್ಜರಿಯನ್ನು ನಡೆಸಲಾಗಿದೆ.

ಪ್ರಾಣಿಗಳ ಮೇಲೆ ರೂಟ್ ಕ್ಯಾನಲ್ ಚಿಕಿತ್ಸೆ ಅಪರೂಪವಲ್ಲ. ಆದರೆ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ನೀಡಲಾಗುವ ಚಿಕಿತ್ಸೆಯಲ್ಲಿ ಕೆಲ ವ್ಯತ್ಯಾಸಗಳಿವೆ. ಪ್ರಾಣಿಗಳು ಅಗಿಯಲು, ತಿನ್ನಲು, ರಕ್ಷಣೆಗೆ ಮತ್ತು ಆಕ್ರಮಣ ಮಾಡಲು ಹಲ್ಲನ್ನು ಬಳಸುವುದರಿಂದ ಹಲ್ಲಿಗೆ ನೋವು ಬಂದರೆ ಅವುಗಳ ಸ್ಥಿತಿ ಚಿಂತಾಜನಕವಾಗಿರುತ್ತದೆ. ಪರಿಣಾಮ ಅವುಗಳ ನಡವಳಿಕೆಯಲ್ಲಿ ಬದಲಾವಣೆಯಾಗುತ್ತದೆ. ಆಕ್ರಮಣಶೀಲತೆ ಬೆಳೆಸಿಕೊಳ್ಳಬಹುದು ಮತ್ತು ಅವುಗಳ ಮನಸ್ಥಿತಿಯಲ್ಲಿ ಕೂಡ ವ್ಯತ್ಯಾಸ ಸಹಜ. ಹಲ್ಲು ಕಿತ್ತು ಬಿಟ್ಟರೆ ಅದು ಶಾಶ್ವತವಾಗಿ ಪ್ರಾಣಿಯನ್ನು ನಿಷ್ಕ್ರಿಯಗೊಳಿಸಬಹುದು. ಹೀಗಾಗಿ ಅನಿವಾರ್ಯವಾದರೆ ಮಾತ್ರ ವೈದ್ಯರು ಹಲ್ಲುಗಳನ್ನು ಕೀಳುತ್ತಾರೆ ಎಂದು ಸಖಾರ್ಕರ್ ಹೇಳಿದ್ದಾರೆ.

ಪಂಜರವೊಂದರಲ್ಲಿ ಚಿಕನ್ ತುಂಡುಗಳನ್ನು ಇರಿಸಿದ ದಂತವೈದ್ಯರು ನಾಯಿಗೆ ಆಮಿಷ ಒಡ್ಡಿ, ಪಂಜರ ಪ್ರವೇಶಿಸಿದ ಬಳಿಕ ಅದನ್ನು ಅರಿವಳಿಕೆಗೆ ಒಳಪಡಿಸಿದರು. ನಾಯಿಯನ್ನು ನಿಯಂತ್ರಿಸಿ ಆಪರೇಶನ್ ಟೇಬಲ್‌ಗೆ ಒಯ್ಯುವುದು ಕ್ಲಿಷ್ಟಕರವಾಗಿತ್ತು. ಸಾಮಾನ್ಯ ಅರಿವಳಿಕೆ ಪರಿಣಾಮ ಸೀಮಿತವಾಗಿರುತ್ತದೆ. ಹೀಗಾಗಿ ಒಂದು ಗಂಟೆಯೊಳಗೆ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು ಎಂದು ಸಖಾರ್ಕರ್ ತಿಳಿಸಿದ್ದಾರೆ.

ವನ್ಯಜೀವಿ ಸಂರಕ್ಷಕ ಮತ್ತು ಮುಂಬೈನಲ್ಲಿ ದಂತವೈದ್ಯರಾಗಿರುವ ಡಾ.ಸರಿತಾ ಸುಬ್ರಮಣ್ಯಂ, ಬೀದಿನಾಯಿಗಳ ಮೇಲೆ ರೂಟ್ ಕ್ಯಾನಲ್ ಸರ್ಜರಿ ನಡೆಸಿದ ದೇಶದ ಮೊದಲ ಶಸ್ತ್ರಚಿಕಿತ್ಸಕರು ತಾವು ಎಂದು ಹೇಳಿಕೊಳ್ಳುತ್ತಾರೆ. ಅವರು ಕೂಡ ಸಖಾರ್ಕರ್ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಆದರೆ ಸಖಾರ್ಕರ್ ಪ್ರಕಾರ ನಾಯಿಗೆ ರೂಟ್ ಕ್ಯಾನಲ್ ಶಸ್ತ್ರಚಿಕಿತ್ಸೆ ಮಾಡಿದವರಲ್ಲಿ ತಾವೇ ಮೊದಲಿಗರು.

Comments are closed.