
ಅಹಮದಾಬಾದ್: ಸದೃಢ ಭಾರತ ನಿರ್ಮಾಣಕ್ಕೆ ಜೀವನವನ್ನು ಮುಡಿಪಾಗಿಟ್ಟ ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನು ಏಕತೆಯ ಮಂತ್ರದ ಮೂಲಕ ಒಗ್ಗೂಡಿಸಿ ಭಾರತಕ್ಕೆ ಸುಂದರ ಸ್ವರೂಪ ನೀಡಿದ ದೇಶದ ಮೊದಲ ಉಪಪ್ರಧಾನಿ, ಧೀಮಂತ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲರ ಸಾಧನೆಯನ್ನು ಬಿಂಬಿಸುವ ಏಕತಾ ಪ್ರತಿಮೆ ಇಂದು ಲೋಕಾರ್ಪಣೆಯಾಗಿದ್ದು, ಈ ಯೋಜನೆ ಕುರಿತ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.
ಸರ್ದಾರ್ ವಲ್ಲಭ ಭಾಯ್ ಪಟೇಲರು ಜನಿಸಿದ ನಾಡಿನವರೇ ಆದ ಪ್ರಧಾನಿ ನರೇಂದ್ರ ಮೋದಿ ‘ಉಕ್ಕಿನ ಮನುಷ್ಯ’ನ ಜನ್ಮದಿನದಂದೇ ಅವರ ಪ್ರತಿಮೆ ಅನಾವರಣಗೊಳಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಡೀ ಯೋಜನೆಯ ಒಂದಷ್ಟು ಕುತೂಹಲಕಾರಿ ಅಂಶಗಳನ್ನು ಇಲ್ಲಿ ನೀಡಲಾಗಿದೆ.

2010ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಪ್ರಧಾನಿಯಾಗಿದ್ದಾಗ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. 2013ರಲ್ಲಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದರು. ಬಳಿಕ 2014ರಲ್ಲಿ ಈ ಪ್ರತಿಷ್ಟಿತ ಯೋಜನೆಯ ಹೊಣೆಯನ್ನು ಎಲ್ ಅಂಡ್ ಟಿ ಸಂಸ್ಥೆಗೆ ನೀಡಲಾಯಿತು. ಯೋಜನೆ ಕೈಗೆತ್ತಿಕೊಂಡಿದ್ದ ಎಲ್ ಅಂಡ್ ಟಿ ಸಂಸ್ಥೆ 2015ರಲ್ಲಿ ಸಂಸ್ಥೆ ತನ್ನ ಸಮೀಕ್ಷೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಿತು. 2017ರಲ್ಲಿ ಪ್ರತಿಮೆಯ ಪ್ರಾಥಮಿಕ ಕಾಮಗಾರಿ ಆರಂಭವಾಯಿತು. 2018 ಅಕ್ಟೋಬರ್ 31 ಅಂದರೆ ಇಂದು ಪ್ರತಿಮೆ ಅನಾವರಣಗೊಳ್ಳುತ್ತಿದೆ.
ಇನ್ನು ಈ ಪ್ರತಿಮೆ ಹಲವು ವಿಶೇಷತೆಗಳಿಂದ ಕೂಡಿದ್ದು, ಪ್ರತಿಮೆಗಾಗಿ 1850 ಟನ್ ಕಂಚು ಬಳಕೆ ಮಾಡಲಾಗಿದೆ. ಅಂತೆಯೇ 24,200 ಟನ್ ಉಕ್ಕು ಬಳಕೆ ಮಾಡಲಾಗಿದ್ದು. ಸ್ಮಾರಕ ನಿರ್ಮಾಣಕ್ಕಾಗಿ 22,500 ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ. ಈ ಯೋಜನೆಗಾಗಿ ಸರ್ಕಾರ ಒಟ್ಟು 2989 ಕೋಟಿ ರೂ. ವ್ಯಯಿಸಿದೆ. ಈ ಸ್ಮಾರಕ ನಿರ್ಮಾಣಕ್ಕಾಗಿ ಸರಿ ಸುಮಾರು 3 ಸಾವಿರ ಕಾರ್ವಿುಕರು, 300 ಇಂಜಿನಿಯರ್ಗಳು ಕರ್ತವ್ಯ ನಿರ್ವಹಿಸಿದ್ದಾರೆ.
ಇನ್ನು15 ವರ್ಷ ನಿರ್ವಹಣೆಗಾಗಿ ಎಲ್ ಆಂಡ್ ಟಿ ಕಂಪನಿ 657 ಕೋಟಿ ರೂ. ಮೀಸಲಿರಿಸಿದ್ದು, ಗುಜರಾತ್ ನ ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ ಅಣೆಕಟ್ಟೆಯ ಸಾಧು ಬೇಟ್ ನಡುಗಡ್ಡೆಯಲ್ಲಿ ಪ್ರತಿಮೆ ನಿರ್ಮಾಣವಾಗಿದೆ. ಇಡೀ ಪ್ರತಿಮೆ ಒಟ್ಟು 182 ಮೀಟರ್ ಎತ್ತರದಿಂದ ಕೂಡಿದೆ.
ಸರ್ದಾರ್ ಸರೋವರವನ್ನು 400 ಅಡಿ ಎತ್ತರದಲ್ಲಿ ನಿಂತುಕೊಂಡು ಕಣ್ತುಂಬಿಕೊಳ್ಳುವ ಅವಕಾಶ. ಏಳು ಕಿ.ಮೀ. ದೂರದಿಂದಲೇ ಬರಿಗಣ್ಣಿಗೆ ಗೋಚರಿಸುವ ಪುತ್ಥಳಿ.
Comments are closed.