ರಾಷ್ಟ್ರೀಯ

13 ಮಂದಿ ಮುಸ್ಲಿಂ ಕುಟುಂಬದಿಂದ ಹಿಂದೂ ಧರ್ಮಕ್ಕೆ ಮತಾಂತರ!

Pinterest LinkedIn Tumblr


ಮೀರತ್: ತಮ್ಮದೇ ಸಮುದಾಯದವರ ಮತ್ತು ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತ ಮುಸ್ಲಿಂ ಕುಟುಂಬವೊಂದರ 13 ಜನ ಸದಸ್ಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬಾಗ್ಪತ್ ಜಿಲ್ಲೆಯ ಬದರ್ಕಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.

ಕೆಲ ತಿಂಗಳ ಹಿಂದೆ ಈ ಕುಟುಂಬದ 28 ವರ್ಷದ ಯುವಕನ ಹತ್ಯೆಯಾಗಿತ್ತು. ನ್ಯಾಯ ಪಡೆದುಕೊಳ್ಳಲು ತಮ್ಮದೇ ಸಮುದಾಯವರ ಸಹಕಾರ ದೊರೆಯದಿದ್ದುದು ಮತ್ತು ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ತು ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಮತಾಂತರಗೊಂಡಿರುವ ಕುಟುಂಬದ ಹಿರಿಯ ಸದಸ್ಯ 68ವರ್ಷದ ಅಕ್ತರ ಅಲಿ ( ಈಗ ಧರಂ ಸಿಂಗ್) ಹೇಳಿದ್ದಾರೆ.

ಆದರೆ ಹಿಂದೂ ಯುವ ವಾಹಿನಿ ಕಾರ್ಯಕರ್ತರು ಹೇಳಿರುವ ಪ್ರಕಾರ, ಇದು ಘರ್ ವಾಪ್ಸಿ ಪ್ರಕರಣವಾಗಿದ್ದು, ” ಮರುಸೇರ್ಪಡೆ ಸಮಾರಂಭ”ದ ಭಾಗವಾಗಿ ದೇವಸ್ಥಾನದಲ್ಲಿ ಹವನವನ್ನು ಕೈಗೊಳ್ಳಲಾಗಿತ್ತು. ಸಮಾರಂಭ ಸಂಪನ್ನಗೊಂಡ ಬಳಿಕ ವಂದೇ ಮಾತರಂ ಅನ್ನು ಸಹ ಹಾಡಲಾಯಿತು.

”ಇದು ಮತಾಂತರ ಪ್ರಕರಣವಲ್ಲ, ಬದಲಾಗಿ ಮರು ಮತಾಂತರ. 5-6 ತಲೆಮಾರಿನಾಚೆ ಈ ಕುಟುಂಬದ ಪೂರ್ವಜರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಮತ್ತೀಗ ಮಾತೃ ಧರ್ಮಕ್ಕೆ ಮರಳಿದ್ದಾರೆ”, ಎಂದು ವಾಹಿನಿಯ ಜಿಲ್ಲಾಧ್ಯಕ್ಷ ಯೋಗೆಂದರ್ ತೋಮರ್ ಹೇಳಿದ್ದಾರೆ.

ಧರಂ ಸಿಂಗ್ ಅವರ ಕುಟುಂಬದಲ್ಲಿ ಒಟ್ಟು 20 ಜನ ಸದಸ್ಯರಿದ್ದು, ಅದರಲ್ಲಿ 13 ಜನ ಹಿಂದೂಗಳಾಗಿದ್ದಾರೆ. ಮೂವರು ಗಂಡು ಮಕ್ಕಳು ಸಹ ಹಿಂದೂಗಳಾಗಿದ್ದು, ದಿಲ್ಸಾದ್ ಈಗ ದಿಲರ್, ನೌಶಾದ್ ಇದ್ದವ ನರೇಂದ್ರ ಮತ್ತು ಇರ್ಷಾದ್ ಎಂಬುವವ ಕವಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಕ್ತರ್ ಅವರ ಮೂವರು ಸೊಸೆಯರು, 6 ಜನ ಮೊಮ್ಮಕ್ಕಳು ಸಹ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.

ಜುಲೈ 28ರಂದು ಅಕ್ತರ್ ಅವರ ಮಗ ಗುಲ್‌ಹಸನ್ ಕೊಲೆ ಮಾಡಿ ಆತನ ಶವವನ್ನು ಮರಕ್ಕೆ ತೂಗು ಹಾಕಿ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗಿತ್ತು. ”ನನ್ನ ಮಗನ ಹತ್ಯೆಯಾದಾಗ ಸಹಾಯಕ್ಕೆ ಬರುವಂತೆ ಪೊಲೀಸರು ಮತ್ತು ಸಮುದಾಯದ ಸದಸ್ಯರಲ್ಲಿ ಎಷ್ಟು ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಯಾರು ಕೂಡ ಸಹಾಯಕ್ಕೆ ಬರಲಿಲ್ಲ. ಮುಸ್ಲಿಂ ಪಂಚಾಯತ್ ನಮ್ಮ ಸಹಾಯಕ್ಕೆ ಬರುವುದರ ಬದಲಾಗಿ ಅವಮಾನಿಸಿತು. ನಮ್ಮದೇ ಸಮುದಾಯದಿಂದ ಸಹಕಾರ ದೊರೆಯದಿದ್ದುದಕ್ಕೆ ನಾವು ಧರ್ಮ ಪರಿವರ್ತನೆ ಮಾಡಲು ನಿರ್ಧರಿಸಿದೆವು. ಈಗಲಾದರೂ ನಾವು ನ್ಯಾಯ ಪಡೆದುಕೊಳ್ಳುತ್ತೇವೆ ಎಂಬ ನಂಬಿಕೆ ಇದೆ”, ಎಂದು ಅಕ್ತರ್ ಭರವಸೆ ವ್ಯಕ್ತಪಡಿಸಿದ್ದಾರೆ.

Comments are closed.