ರಾಷ್ಟ್ರೀಯ

ಅಮಿತ್ ಶಾ ನನ್ನ ವಿರುದ್ಧ ಸ್ಪರ್ಧಿಸಲಿ: ಓವೈಸಿ

Pinterest LinkedIn Tumblr


ಹೈದರಾಬಾದ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಆಲ್‌ ಇಂಡಿಯಾ ಮಜ್‌ಲಿಸ್‌ ಎ ಇತ್ತೆಹಾದ್‌ ಉಲ್‌ ಮುಸ್ಲಿಮೀನ್‌ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ.

ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅಲ್ಪಸಂಖ್ಯಾತರನ್ನು ಪ್ರಚೋದಿಸುವ ಮೂಲಕ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದು, ಗೌಪ್ಯವಾಗಿ ಆಲ್‌ ಇಂಡಿಯಾ ಮಜ್‌ಲಿಸ್‌ ಎ ಇತ್ತೆಹಾದ್‌ ಉಲ್‌ ಮುಸ್ಲಿಮೀನ್‌ (ಎಐಎಂಐಎಂ) ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ ಬೆನ್ನಲ್ಲೇ ಓವೈಸಿ ಈ ಸವಾಲು ಎಸೆದಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಈಗಿರುವ ಐದು ಸ್ಥಾನಗಳನ್ನು ಸಹ ಉಳಿಸಿಕೊಳ್ಳಲಾಗದು ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

‘ನಿಮ್ಮ ಕಾರ್ಯತಂತ್ರವನ್ನು ಬಗ್ಗುಬಡೆಯಲು ಹೈದರಾಬಾದ್ ಹಾಗೂ ತೆಲಂಗಾಣ ಜನರು ಸಿದ್ಧರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಮಿತ್ ಶಾ ಹೈದರಾಬಾದ್ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಮನವಿ ಮಾಡುತ್ತೇನೆ ಹಾಗೂ ಈ ಚುನಾವಣಾ ಸಮರದಲ್ಲಿ ಎಂಐಎಂ ಗೆಲುವು ಶತಸಿದ್ಧ. ವಿಧಾನಸಭೆಯಲ್ಲಿ ಬಿಜೆಪಿಗೆ ಈಗಿರುವ ಐದು ಸ್ಥಾನಗಳನ್ನು ಸಹ ಉಳಿಸಿಕೊಳ್ಳಲು ಆಗುವುದಿಲ್ಲ’ ಎಂದಿದ್ದಾರೆ.

ತೈಲ ಬೆಲೆ ನಿಯಂತ್ರಣ ಹಾಗೂ ಉದ್ಯೋಗದಂಥ ಜ್ವಲಂತ ಸಮಸ್ಯೆಗಳಿಗೆ ಬಿಜೆಪಿ ಬಳಿ ಉತ್ತರವೇ ಇಲ್ಲ ಎಂದು ಓವೈಸಿ ಟ್ಲೀಟ್‌ನಲ್ಲಿ ತಿಳಿಸಿದ್ದಾರೆ.

ಮೆಹಬೂಬ್‌ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಓವೈಸಿ ಟ್ವೀಟ್‌ಗೆ ತಿರುಗೇಟು ನೀಡಿರುವ ಬಿಜೆಪಿ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಲಕ್ಷ್ಮಣ, ”ಎಂಐಎಂ ಮುಖ್ಯಸ್ಥ ಓವೈಸಿ ವಿರುದ್ಧ ಅಮಿತ್ ಶಾ ಅವರಂಥ ಮೇರು ನಾಯಕರನ್ನು ಕಣಕ್ಕಿಳಿಸುವ ಅಗತ್ಯವಿಲ್ಲ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತರನ್ನು ಅಖಾಡಕ್ಕಿಳಿಸಿದರೇ ಸಾಕು’ ಎಂದಿದ್ದಾರೆ.

Comments are closed.