ರಾಷ್ಟ್ರೀಯ

ಹರಿಯಾಣ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ: ಒಬ್ಬನ ಬಂಧನ

Pinterest LinkedIn Tumblr


ಚಂಡೀಗಢ: ಮಹೇಂದ್ರಗಢ ಜಿಲ್ಲೆಯಲ್ಲಿ ನಡೆದ ಸಿಬಿಎಸ್‌ಇ ಟಾಪರ್‌ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ಇಬ್ಬರಿಗಾಗಿ ಪೊಲೀಸರು ಭಾನುವಾರ ಹಲವಾರು ಕಡೆ ದಾಳಿ ನಡೆಸಿದರು.

ಹರಿಯಾಣ, ರಾಜಸ್ಥಾನ, ದಿಲ್ಲಿ ಮತ್ತು ಇತರ ರಾಜ್ಯಗಳಲ್ಲಿ ದಾಳಿ ನಡೆದಿದ್ದು, ಹಲವಾರು ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಯುವತಿ ವಾಸಿಸುವ ರೇವಾರಿ ಗ್ರಾಮದ ನಿವಾಸಿಗಳೇ ಆಗಿರುವ ಸೇನಾ ಯೋಧ ಪಂಕಜ್‌, ಮನೀಷ್‌ ಮತ್ತು ನಿಶು ಆರೋಪಿಗಳಾಗಿದ್ದು, ಪರಿಚಿತರೇ ಆಗಿದ್ದಾರೆ. ಘಟನೆ ನಡೆದ ದಿನದಿಂದಲೇ ನಾಪತ್ತೆಯಾಗಿದ್ದಾರೆ. ಆರೋಪಿಗಳ ತ್ವರಿತ ಪತ್ತೆಗಾಗಿ ಯುವತಿಯ ತಾಯಿ ಮತ್ತು ಇತರರು ಪೊಲೀಸರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಸಾರ್ವಜನಿಕವಾಗಿಯೂ ಒತ್ತಡ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸಂತ್ರಸ್ತೆಗೆ ಮೊದಲು ಚಿಕಿತ್ಸೆ ನೀಡಿದ ವೈದ್ಯ ಮತ್ತು ಕೃತ್ಯ ನಡೆದ ಜಮೀನಿನ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.

ಮಾಹಿತಿ ಪಡೆದ ಸಿಎಂ

ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರು ಭಾನುವಾರ ಪೊಲೀಸ್‌ ಮಹಾನಿರ್ದೇಶಕ ಬಿ.ಎಸ್‌.ಸಂಧು ಅವರನ್ನು ಕರೆಸಿಕೊಂಡು ತನಿಖೆಯ ಪ್ರಗತಿ ಕುರಿತು ಮಾಹಿತಿ ಪಡೆದಿದ್ದಾರೆ.

ಪಂಜಾಬ್‌ನ ಜಲಂಧರ್‌ಗೆ ತೆರಳಬೇಕಿದ್ದ ಸಿಎಂ, ಪ್ರವಾಸ ರದ್ದುಪಡಿಸಿ ಡಿಜಿಪಿ ಜತೆ ಸಭೆ ನಡೆಸಿದರು. ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ರೇವಾರಿ ಜಿಲ್ಲೆಯ ಎಸ್ಪಿ ರಾಜೇಶ್‌ ದುಗ್ಗಲ್‌ ಅವರನ್ನು ಅಮಾನತುಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಮುಖ್ಯಮಂತ್ರಿಯವರ ಭದ್ರತಾ ವಿಭಾಗದ ಎಸ್ಪಿ ರಾಹುಲ್‌ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ.

ಘಟನೆ ನಡೆದ ಸ್ಥಳ ಯಾವ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ ಎನ್ನುವ ಕುರಿತಾಗಿಯೇ ರೇವಾರಿ ಮತ್ತು ಮಹೇಂದ್ರಗಢ ಜಿಲ್ಲೆಯ ಎಸ್ಪಿಗಳು ಕಾಲಹರಣ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿದೆ.

Comments are closed.