ರಾಷ್ಟ್ರೀಯ

ತೆಲಂಗಾಣದಲ್ಲಿ ಏಕಾಂಗಿಯಾಗಿ ಸ್ಪರ್ಧೆ: ಅಮಿತ್​ ಶಾ

Pinterest LinkedIn Tumblr


ಹೈದ್ರಾಬಾದ್​ : ತೆಲಂಗಾಣದಲ್ಲಿ ಸರ್ಕಾರ ರಚನೆಗೆ ಕೆಸಿಆರ್​ ಜೊತೆ ಕಮಲಪಾಳಯ ಕೈ ಜೋಡಿಸುವ ಸಾಧ್ಯತೆ ಎನ್ನುವ ಊಹಾಪೋಹಗಳ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ತಾವು ಏಕಾಂಗಿಯಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಬೂಬು ನಗರದಲ್ಲಿ ನಡೆದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಆರ್​ಎಸ್​ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳದೇ ತೆಲಂಗಾಣದಲ್ಲಿ ಬಿಜೆಪಿ ಏಕಾಂಗಿ ಕಣಕ್ಕೆ ಇಳಿಯಲಿದೆ ಎಂದರು. ಇದೇ ವೇಳೆ ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿದ ಕ್ರಮಕ್ಕೆ ಕೆ ಚಂದ್ರಶೇಖರ್​ ರಾವ್​ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಮುಂದೆ ರಾವ್​ ನೇತೃತ್ವದ ಪಕ್ಷ ಏಕಕಾಲದಲ್ಲಿ ನಡೆಯಲಿರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಬೆಂಬಲ ನೀಡುವುದಾಗಿ ಹೇಳಿದ್ದರು, ಆದರೆ ಬಳಿಕ ತನ್ನ ನಿಲುವನ್ನು ಟಿಆರ್​ಎಸ್​ ಬದಲಿಸಿಕೊಂಡಿತ್ತು ಎಂದು ಕಿಡಿಕಾರಿದರು.

ಬಿಜೆಪಿ ಅದರ ಬಲಶಕ್ತಿಯಿಂದಲೇ ಹೋರಾಟ ನಡೆಸಲಿದೆ. ಚುನಾವಣೆಯಲ್ಲಿ ಪ್ರಬಲ ಪಕ್ಷವಾಗಿ ಹೊರಹೊಮ್ಮಲಿದೆ. ನಮ್ಮ ಹೋರಾಟ ಅತೃಪ್ತಿ ರಾಜಕಾರಣ, ಸ್ಥಗಿತಗೊಂಡ ಪ್ರಗತಿ ವಿರುದ್ಧ ಹೋರಾಡಲಿದೆ ಎಂದು ಗುಡುಗಿದರು.

ಕಾಂಗ್ರೆಸ್ ಮತ್ತಿತ್ತರ ಪಕ್ಷಗಳ​ ಮಹಾಮೈತ್ರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಂಜಯ್ಯ ಹಾಗೂ ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್​ ಜೊತೆ ಕಾಂಗ್ರೆಸ್​ ಹೇಗೆ ನಡೆದುಕೊಂಡಿದೆ ಎಂದು ಇಲ್ಲಿನ ಜನ ಮರೆತಿಲ್ಲ ಎಂದರು.

ಒಂದು ದೇಶ ಒಂದು ಚುನಾವಣೆಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾಗ ಚಂದ್ರ ಶೇಖರ್​ ರಾವ್​ ಮೊದಲಿಗೆ ಬೆಂಬಲ ನೀಡಿದ್ದರು. ಆದರೆ ಈಗಿನ ಪರಿಸ್ಥಿತಿ ಬೇರೆಯಾಗಿದೆ. ಜನರಿಗೆ ಚುನಾವಣೆ ವಿಚಾರದಲ್ಲಿ ಟಿಆರ್​ಎಸ್​ ಖರ್ಚುವೆಚ್ಚದ ಹೊರೆ ಹೊರೆಸುತ್ತಿದೆ. ಯಾವ ಕಾರಣದಿಂದ ಅವರು 9ತಿಂಗಳು ಮುಂಚಿತವಾಗಿ ಚುನಾವಣೆ ಎದುರಿಸುವ ನಿರ್ಧಾರ ಮಾಡಿದರು ಎಂದು ಅವರೇ ಉತ್ತರಿಸಬೇಕು ಎಂದು ಪ್ರಶ್ನಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ತೆಲಂಗಾಣದಲ್ಲಿ 4,200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, 13ನೇ ಹಣಕಾಸು ಆಯೋಗದಲ್ಲಿ ಕೇಂದ್ರ 15 ಕೋಟಿ ಹಣವನ್ನು ನೀಡಿದೆ. ಕೇಂದ್ರದ ಕೆಲವು ಯೋಜನೆಗಳನ್ನು ರಾಜ್ಯದಲ್ಲಿ ಸರಿಯಾಗಿ ಅನುಷ್ಟಾನ ಮಾಡಿಲ್ಲ. ಜನರಿಗೆ ಆಶ್ವಾಸನೆ ನೀಡಿದ್ದ ಎರಡು ರೂಂಗಳ ಮನೆ ಯೋಜನೆಯ ಭರವಸೆಯನ್ನು ಕೂಡ ಈಡೇರಿಸಿಲ್ಲ ಎಂದರು.

ನಿಜಾಮ ರಾಜ್ಯವನ್ನು ಕೇಂದ್ರಕ್ಕೆ ಒಪ್ಪಿಸಿದ ದಿನವಾದ ಸೆ.17ರ ವಿಮೋಚನದಿನವನ್ನು ಎಐಎಂಐಎಂನ ಒತ್ತಡದಿಂದಾಗಿ ಆಚರಿಸುತ್ತಿಲ್ಲ. ಹೊಸದಾಗಿ ವಿಭಜನೆಯಾದ ಜಿಲ್ಲೆಗಳು ಮೂಲಸೌಕರ್ಯದಿಂದ ವಂಚಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.

Comments are closed.