
ಅಹಮದಾಬಾದ್: ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31ಕ್ಕೆ ಅನಾವರಣಗೊಳಿಸಲಿದ್ದಾರೆ.
ವಿಶ್ವದ ಅತಿ ಎತ್ತರದ ಪ್ರತಿಮೆ ಎನ್ನಲಾದ ಸರ್ದಾರ್ ಪಟೇಲ್ ಪ್ರತಿಮೆಯು 182 ಮೀಟರ್ ಎತ್ತರವಿದೆ. ಪ್ರತಿಮೆಯು ರಾಷ್ಟ್ರದ ಏಕತೆ ಮತ್ತು ಪರಿಪೂರ್ಣತೆಯ ಪ್ರತೀಕ ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬಿಜೆಪಿ ರಾಷ್ಟ್ರಾದ್ಯಂತ ಉಕ್ಕು, ಮಣ್ಣು ಮತ್ತು ನೀರನ್ನು ಸಂಗ್ರಹಿಸಿ ನಿರ್ಮಿಸಿದ ಪ್ರತಿಮೆಯಿದು ಎಂದು ರೂಪಾನಿ ಹೇಳಿದ್ದಾರೆ. 2013ರಲ್ಲಿ ಅಂದಿನ ಗುಜರಾತ್ ಸಿಎಂ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ನಿರ್ಮಾಣದ ಘೋಷಣೆ ಮಾಡಿದ್ದರು.
ಪ್ರತಿಮೆಯು ಸರ್ದಾರ್ ಪಟೇಲ್ ರಾಷ್ಟ್ರಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಬಿಂಬಿಸುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಕೆಲವರು ರಾಷ್ಟ್ರದ ಐಕ್ಯತೆಯನ್ನು ಮುರಿಯುವ ಹನ್ನಾರ ನಡೆಸುತ್ತಿದ್ದಾರೆ ಎಂದು ನಗರ ನಕ್ಸಲರು ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ.
ಸರ್ದಾರ್ ಪಟೇಲ್ ಉಕ್ಕಿನ ಪ್ರತಿಮೆ
ಅಂದು ಪ್ರಧಾನಿ ಮೋದಿ ಅವರು ಸರ್ದಾರ್ ಪಟೇಲ್ ಪ್ರತಿಮೆಯನ್ನು ನಿರ್ಮಿಸುವ ಕುರಿತು ಘೋಷಣೆ ಮಾಡಿದಾಗ ಪ್ರತಿಪಕ್ಷಗಳು ಟೀಕಿಸಿದ್ದವು. ಆದರೆ ಇದೀಗ ವಿಶ್ವದ ಅತ್ಯಂತ ಎತ್ತರದ ಪಟೇಲ್ ಪ್ರತಿಮೆ ನಿರ್ಮಿಸಿ ಸಾಧನೆ ಮಾಡಿದ್ದೇವೆ. ಕಾಂಗ್ರೆಸ್ ಸರ್ದಾರ್ ಪಟೇಲ್ ಅವರನ್ನು ದೂರವಿರಿಸಿತ್ತು. ಆದರೆ ಬಿಜೆಪಿ ಅವರ ಸಾಧನೆಗಳನ್ನು ಮುನ್ನೆಲೆಗೆ ತಂದಿದೆ ಎಂದು ರೂಪಾನಿ ತಿಳಿಸಿದ್ದಾರೆ.
Comments are closed.