ರಾಷ್ಟ್ರೀಯ

ನರ್ಮದಾ ನದಿಯಲ್ಲಿ ತೇಲಿ ಬಂದ ನಿಷೇಧಿತ ರಾಶಿ ರಾಶಿ ನೋಟುಗಳು

Pinterest LinkedIn Tumblr


ವಡೋದರಾ: ಅಮಾನ್ಯೀಕರಣಗೊಂಡ ಕರೆನ್ಸಿಯಲ್ಲಿ ಕೇವಲ 0.7% ಕರೆನ್ಸಿ ನೋಟುಗಳು ಮರಳಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿದ ಬೆನ್ನಲ್ಲೇ ಗುರುವಾರ ನರ್ಮದಾ ನದಿಯಲ್ಲಿ ನಿಷೇಧಗೊಂಡಿರುವ ಹಳೆಯ ನೋಟುಗಳು ರಾಶಿ ರಾಶಿ ತೇಲಿ ಬಂದಿವೆ.

ಗುಜರಾತಿನ ಶೀನೋರ್ ತಾಲೂಕಿನ ಮಲ್ಸಾರ್ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಈಜಲು ಹೋಗಿದ್ದ ಕೆಲವರಿಗೆ 500, 1000 ಮುಖಬೆಲೆಯ ನೋಟುಗಳು ತೇಲಿ ಬಂದಿದ್ದು ಕಾಣಿಸಿದೆ. ಈ ಸುದ್ದಿ ಊರೆಲ್ಲ ಹಬ್ಬುತ್ತಿದ್ದಂತೆ ನದಿ ತೀರದಲ್ಲಿ ಜನಸಾಗರವೇ ಹರಿದು ಬಂತು. ಅವರಲ್ಲಿ ಕೆಲವರು ನದಿಗೆ ಹಾರಿ ನೋಟುಗಳನ್ನು ಬಾಚಿಕೊಂಡು ಬಂದಿದ್ದಾರೆ.

ಗ್ರಾಮಸ್ಥರಲ್ಲಿ ಒಬ್ಬರಾದ ರಾಮನ್ ಮಚ್ಚಿ ಈ ಕುರಿತು ಪೊಲೀಸರಿಗೆ ನೀಡಿದ್ದು ಪೊಲೀಸರು ಅಲ್ಲಿಗೆ ಬರುವಷ್ಟರಲ್ಲಿ ಹೆಚ್ಚಿನ ನೋಟುಗಳನ್ನು (ಮೌಲ್ಯ ಕಳೆದುಕೊಂಡಿರುವ) ಜನರು ಎತ್ತಿಕೊಂಡು ಹೋಗಿಯಾಗಿತ್ತು.

ಉಳಿದಿದ್ದ 1,000 ರೂಪಾಯಿ ಮುಖಬೆಲೆಯ 36 ಮತ್ತು 500ರ ಮುಖಬೆಲೆಯ 2 ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೋಟುಗಳನ್ನು ನದಿಗೆಸೆದವರು ಯಾರು ಎಂದು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬುಧವಾರ ತನ್ನ ವಾರ್ಷಿಕ ವರದಿಯಲ್ಲಿ ಆರ್‌ಬಿಐ ಅಮಾನ್ಯೀಕರಣಗೊಂಡ ನೋಟಿನಲ್ಲಿ 0.7% ನೋಟುಗಳು ಮರಳಿಲ್ಲ ಎಂದು ಹೇಳಿತ್ತು.

Comments are closed.