ರಾಷ್ಟ್ರೀಯ

ಹಿರಿಯ ಸಹಪಾಠಿಯಿಂದ ವಿದ್ಯಾರ್ಥಿನಿ ಹತ್ಯೆ: ಕೊಲೆ ಮುನ್ನ ಆಕೆ ಬರೆದ ಕವಿತೆ ಸಾಕ್ಷಿ

Pinterest LinkedIn Tumblr


ಹೊಸದಿಲ್ಲಿ: ‘ಕಣ್ಣು ಮುಚ್ಚಿದಾಗ ಪ್ರತಿಬಾರಿ ನಾನು ಸಾಯಲು ಬಯಸುವೆ. ನಾನು ಕರಾಳ ಸ್ವರ್ಗ ಕಾಣುವೆ. ನನ್ನದೇ ಭಯದಿಂದ ನಾನು ನಲುಗಿದ್ದೇನೆ, ನರಳುತ್ತಿದ್ದೇನೆ. ಗೊಂಬೆಗಳ ಜತೆ ಗೊಂಬೆಗಳಾಗಿ ಆಡುವ ಆನಂದವನ್ನು ನಾವೀಗ ಕಳೆದುಕೊಂಡಿದ್ದೇವೆ. ಹೀಗಾಗಿ ಹುಡುಗರು ಹುಡುಗರೇ ಆಗುತ್ತಾರೆ, ನಮ್ಮಂಥ ಹೆಣ್ಣುಗಳ ಹೆಣಗಾಟಕ್ಕೆ ಕೊನೆ ಇಲ್ಲವಾಗುತ್ತದೆ’- ನೋವಲ್ಲಿ ಅದ್ದಿ ತೆಗೆದಂಥ ಈ ಕವನ ಬರೆದ 16ರ ಹರೆಯದ ಬಾಲಕಿ ಶ್ರೇಯಾ ಶರ್ಮಾ ಕೊಲೆಯಾಗಿ ವರ್ಷಗಳೇ ಕಳೆದಿದೆ. ಕೊಲೆ ಮಾಡಿದ ಆಕೆಯ ಹಿರಿಯ ಸಹಪಾಠಿ ಸಾರ್ಥಕ್ ಕಪೂರ್‌ಗೆ ಮಂಗಳವಾರ ಜೀವಾವಧಿ ಶಿಕ್ಷೆಯಾಗಿದೆ. ಸೋಜಿಗವೆಂದರೆ ಶ್ರೇಯಾ ಕೊಲೆಯಾಗುವ ಒಂದು ತಾಸು ಮೊದಲು, ತನ್ನ ಬೇಗುದಿಯನ್ನು ಹೊರಹಾಕುತ್ತ ಬರೆದಿದ್ದ ಈ ಕವನವೇ ಕೊಲಗಾರನ ಶಿಕ್ಷೆಗೆ ಸಾಕ್ಷಿ ನುಡಿಯಿತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಷ ವೀರೇಂದ್ರ ಕುಮಾರ್ ಬನ್ಸಾಲ್ ಶಿಕ್ಷೆ ಪ್ರಕಟಿಸುವ ಮೊದಲು ಈ ಕವನ ವಾಚಿಸಿ , ಅಪರಾಧಿಗೆ ಜೀವಾವಧಿ ಶಿಕ್ಷೆ ಘೋಷಿಸಿದರು.

ಹಿನ್ನೆಲೆ: ಶ್ರೇಯಾ ಕಲಿಯುತ್ತಿದ್ದ ಶಾಲೆಯಲ್ಲಿಯೇ ಹಿರಿಯ ಸಹಪಾಠಿಯಾಗಿದ್ದ ಸಾರ್ಥಕ್, ಪ್ರೀತಿಯ ಸುಳಿಗೆ ಸಿಲುಕಿದ್ದ. ಆದರೆ ಶ್ರೇಯಾಗೆ ಆತನ ಬಗ್ಗೆ ಗೌರವವಿತ್ತೇ ವಿನಾ ಪ್ರೀತಿಸಿ ಮದುವೆಯಾಗುವ ಮನಸ್ಸಿರಲಿಲ್ಲ. ಇದನ್ನಾಕೆ ಆತನಿಗೆ ತಿಳಿಸಿದ್ದಳು.

ಆಕೆಯನ್ನು ಅರ್ಥ ಮಾಡಿಕೊಳ್ಳುವ ಬದಲು ಹತಾಶಗೊಂಡ ಸಾರ್ಥಕ್, ತನಗೆ ಸಿಕ್ಕದ ಗೆಳತಿ ಬೇರಾರಿಗೂ ಸಿಗಬಾರದು ಎಂದುಕೊಂಡು ಆಕೆಯ ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆಗೈದಿದ್ದ.

Comments are closed.