
ಸಾಮಾಜಿಕ ಜಾಲತಾಣಗಳಲ್ಲಿ ಮನಸೋ ಇಚ್ಛೆ ಸಂಗತಿಗಳನ್ನು ಹಂಚುವ ಪ್ರವೃತ್ತಿ ಹೊಂದಿರುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಾಡಿ ಎಬ್ಬಿಸಬೇಡಿ ಎಂದು ಕರೆ ನೀಡಿದ್ದಾರೆ.
ವಾರಾಣಸಿಯ ಬಿಜೆಪಿ ಕಾರ್ಯಕರ್ತರು ಹಾಗೂ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿರುವ ವೇಳೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಜಾಲತಾಣವನ್ನು ಒಳ್ಳೆಯ ವಿಷಯಕ್ಕೆ ಬಳಕೆ ಮಾಡಬೇಕೇ ಹೊರತು ಸುಳ್ಳು ಸುದ್ದಿಯನ್ನು ಹಬ್ಬಿಸಿ, ರಾಡಿ ಎಬ್ಬಿಸುವುದಕ್ಕೆ ಅಲ್ಲ ಎಂದು ಹೇಳಿದ್ದಾರೆ.
ದೇಶದ ಜನತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ, ರಾಡಿ ಎಬ್ಬಿಸುವುದು ಸಭ್ಯ ಸಮಾಜದ ವರ್ತನೆಯಲ್ಲ, ಈ ವಿಷಯ ಯಾವುದೇ ಸಿದ್ಧಾಂತಕ್ಕೆ ಸಂಬಂಧಿಸಿದ್ದಲ್ಲ ಬದಲಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಧ್ಯವಾದಷ್ಟೂ ಒಳ್ಳೆಯ ಸಂಗತಿಗಳತ್ತ ಗಮನ ಹರಿಸುವುದಕ್ಕೆ ತಮ್ಮನ್ನು ತಾವು ತರಬೇತುಗೊಳಿಸಿಕೊಳ್ಳಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಒಂದು ಸಂಗತಿಯನ್ನು ನೋಡುತ್ತಿದ್ದಂತೆಯೇ, ಕೇಳುತ್ತಿದ್ದಂತೆಯೇ ಜನತೆ ಅದನ್ನು ಫಾರ್ವರ್ಡ್ ಮಾಡುತ್ತಾರೆ. ಆದರೆ ಅದರಿಂದ ಸಮಾಜಕ್ಕೆ ಯಾವ ರೀತಿಯ ಹಾನಿ ಉಂಟಾಗುತ್ತದೆ ಎಂಬುದನ್ನು ಯೋಚಿಸುವುದಿಲ್ಲ. ಕೆಲವರಂತೂ ಸಭ್ಯ ಸಮಾಜದ ವರ್ತನೆಗೆ ಧಕ್ಕೆ ಉಂಟಾಗಬಲ್ಲ ರೀತಿಯಲ್ಲಿ ಪದಗಳನ್ನು ಬಳಕೆ ಮಾಡುತ್ತಾರೆ, ಮಹಿಳೆಯರ ಬಗ್ಗೆ ಏನನ್ನಾದರೂ ಹೇಳುತ್ತಾರೆ ಅಥವಾ ಬರೆಯುತ್ತಾರೆ ಎಂದು ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪ್ರವೃತ್ತಿ ಸಿದ್ಧಂತಗಳಿಗೆ ಸಂಬಂಧಪಟ್ಟಿದ್ದಲ್ಲ, ಬದಲಾಗಿ 125 ಕೋಟಿ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವುದನ್ನು ಕಲಿಯಬೇಕು, ಸ್ವಚ್ಛತಾ ಯೋಜನೆ ಮಾನಸಿಕ ಸ್ವಚ್ಛತೆಗೂ ಸಂಬಂಧಿಸಿದ್ದಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಸಾಮರಸ್ಯದ ವಾತಾವರಣದ ಬಗ್ಗೆಯೂ ಮಾತನಾಡಿರುವ ಮೋದಿ, ಸಕಾರಾತ್ಮಕ ಸುದ್ದಿಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಹಲ್ಲಾದ ಎರಡು ಕುಟುಂಬಗಳ ಕಲಹ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವಂತಾಗಿದೆ ಎಂದು ಪಕ್ಷದ ಕಾರ್ಯಕರ್ತರೊಂದಿಗಿನ ವಿಡಿಯೋ ಸಭೆಯಲ್ಲಿ ಹೇಳಿದ್ದಾರೆ.
Comments are closed.