ರಾಷ್ಟ್ರೀಯ

ಆಯುಷ್ಮಾನ್ ಭಾರತ್ ಅಥವಾ ಎನ್‍ಎಚ್‍ಪಿಸಿ ಯೋಜನೆ ಎಂದರೇನು?

Pinterest LinkedIn Tumblr


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆ ‘ಆಯುಷ್ಮಾನ್ ಭಾರತ್’ ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯನ್ನು 72ನೇ ಸ್ವಾತಂತ್ರ್ಯೋತ್ಸವ ದಿನದಂದು ಘೋಷಿಸಲಾಗಿದೆ. ಈ ಯೋಜನೆಯನ್ನು ಸೆಪ್ಟೆಂಬರ್ 25ರ ದೀನ್ ದಯಾಳ್ ಉಪಾಧ್ಯಾಯ ಜಯಂತಿಯಂದು ಆರಂಭಿಸಲಾಗುತ್ತಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಬಿಜೆಪಿ ಮುಖಂಡರು ‘ಮೋದಿಕೇರ್’ ಎಂದು ಬಣ್ಣಿಸಿದ್ದಾರೆ. ಸೆ.25ರ ಬಳಿಕ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯನ್ನು ಫೆಬ್ರವರಿಯಲ್ಲೇ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್‌ನಲ್ಲಿ ಪ್ರಕಟಿಸಿದ್ದರು.

ಆಯುಷ್ಮಾನ್ ಭಾರತ್ ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಎಂದರೇನು?
ಈ ಮಹತ್ವಾಕಾಂಕ್ಷಿ ಯೋಜನೆ ಹತ್ತು ಕೋಟಿ ಕುಟುಂಬಗಳಿಗೆ ವಿಮಾ ಯೋಜನೆ ಕಲ್ಪಿಸಲಿದೆ. ಈ ಯೋಜನೆಯಿಂದ ಸುಮಾರು 50 ಕೋಟಿ ಮಂದಿ ಪ್ರಯೋಜನ ಪಡೆಯಲಿದ್ದಾರ. ಕುಟುಂಬವೊಂದಕ್ಕೆ ವಾರ್ಷಿಕವಾಗಿ 5 ಲಕ್ಷ ರೂ. ಆರೋಗ್ಯ ವಿಮೆ ಕಲ್ಪಿಸಲಾಗುತ್ತದೆ. ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣೆ ಯೋಜನೆ ಇದು ಎಂದು ಬಣ್ಣಿಸಲಾಗಿದೆ. ದೇಶದಾದ್ಯಂತ ಇರುವ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಯನ್ನು ಈ ಯೋಜನೆಯ ಫಲಾನುಭವಿಗಳು ಪಡೆಯಬಹುದಾಗಿದೆ.

ಯಾರಿಗೆಲ್ಲಾ ಆಯುಷ್ಮಾನ್ ಭಾರತ್ ಯೋಜನೆ ಅನ್ವಯ?
ಈ ಯೋಜನೆಯು ಸಾಮಾಜಿಕ ಆರ್ಥಿಕ ಜಾತಿ ಗಣತಿ (ಎಸ್‍ಇಸಿಸಿ) ಆಧಾರವಾಗಿ 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆ ಕಲ್ಪಿಸಲಿದೆ. ಈ ಯೋಜನೆಯಡಿ ಬರುವ ಫಲಾನುಭವಿ ಕುಟುಂಬದ ಸದಸ್ಯರ ಸಂಖ್ಯೆ ಮತ್ತು ವಯಸ್ಸಿಗೆ ಯಾವುದೇ ಮಿತಿಯನ್ನು ಹೇರಿಲ್ಲ. ಈ ಯೋಜನೆಯು ಚಿಕಿತ್ಸೆಗೂ ಮುನ್ನ ಮತ್ತು ನಂತರದ ಆಸ್ಪತ್ರೆ ವೆಚ್ಚಗಳನ್ನು ಒಳಗೊಂಡಿದೆ.

ಈ ಯೋಜನೆಗೆ ಹಣಕಾಸು ಹೊಂದಿಕೆ ಹೇಗೆ?
ಪ್ರೀಮಿಯಂ ಪಾವತಿಗೆ ಖರ್ಚು ಮಾಡುವ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ನಿಗದಿಪಡಿಸಿದ ಅನುಪಾತದಲ್ಲಿ ಹಂಚಲಾಗುತ್ತದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 60:40 ಅನುಪಾತದಲ್ಲಿ ಯೋಜನೆಗೆ ಹಣ ಹೊಂದಿಸಲಾಗುತ್ತದೆ. ಈಶಾನ್ಯ ರಾಜ್ಯಗಳಿಗೆ 90:10 ಅನುಪಾತ ಮತ್ತು ಮೂರು ಹಿಮಾಲಯ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚರ ಪ್ರದೇಶ ಮತ್ತು ಉತ್ತರಖಂಡ ಮತ್ತು ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವೇ ಶೇ.100ರಷ್ಟು ಹಣಕಾಸು ನೀಡಲಿದೆ. ರಾಜ್ಯಗಳು ತಮ್ಮದೇ ಆದ ಆರೋಗ್ಯ ಕಾರ್ಯಕ್ರಮಗಳೊಂದಿಗೆ ಮುಂದುವರೆಯಲು ಸಹ ಮುಕ್ತವಾಗಿವೆ.

ಇದುವರೆಗೆ 14 ರಾಜ್ಯಗಳು ಕೇಂದ್ರದ ಜತೆಗೆ ಕೈಜೋಡಿಸಿವೆ. ಇವುಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಅಸ್ಸಾಂ, ಸಿಕ್ಕಿಂ ಮತ್ತು ಚಂಡಿಗಢ ಟ್ರಸ್ಟ್ ಮಾಡೆಲ್ ಅನುಸರಿಸಲಿವೆ. ಅಂದರೆ ಬಿಲ್‌ಗಳನ್ನು ಸರಕಾರವು ನೇರವಾಗಿ ಮರುಪಾವತಿಸಲಿದೆ. ಗುಜರಾತ್ ಮತ್ತು ತಮಿಳುನಾಡು ಮಿಶ್ರ ವಿಧಾನ ಅನುಷ್ಠಾನ ಮಾಡಿವೆ.

Comments are closed.