
ಚೆನ್ನೈ: ಕಲೈಙರ್ ಕರುಣಾನಿಧಿ ಸಾವಿನ ಬೆನ್ನಲ್ಲೇ ದ್ರಾವಿಡ ಮುನ್ನೇತ್ರ ಕರಗಂ ಪಕ್ಷದಲ್ಲಿನ ಶೀತಲ ಸಮರ ಮುನ್ನೆಲೆಗೆ ಬಂದಿದೆ. ಕರುಣಾನಿಧಿ ಮರಣದ ನಂತರ ಡಿಎಂಕೆ ಪಕ್ಷವನ್ನು ಎಂ.ಕೆ. ಸ್ಟಾಲಿನ್ ಮುನ್ನಡೆಸುತ್ತಾರೆ ಎನ್ನಲಾಗಿತ್ತು, ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಎಂ.ಎಕೆ. ಅಳಗಿರಿ ಪಕ್ಷದ ಮುಖಂಡರು ತಮ್ಮ ಜೊತೆಗಿದ್ದಾರೆ ಎಂದಿದ್ದಾರೆ.
ಕರುಣಾನಿಧಿಯವರ ಮಕ್ಕಳಲ್ಲಿ ಎಂ.ಕೆ. ಸ್ಟಾಲಿನ್ ಪ್ರೀತಿಪಾತ್ರರಾಗಿದ್ದವರು ಮತ್ತು ಕರುಣಾನಿಧಿಯವರ ವಾರಸುದಾರ ಎಂದೇ ಕರೆಸಿಕೊಂಡಿದ್ದರು. ಆದರೆ ಮತ್ತೊಬ್ಬ ಮಗ ಅಳಗಿರಿ ಈಗ ಪ್ರತಿರೋಧ ಒಡ್ಡಿದ್ದು, ಸ್ಟಾಲಿನ್ ಡಿಎಂಕೆಯ ಮುಂದಿನ ಅಧಿಪತಿಯಲ್ಲ ಎಂದಿದ್ದಾರೆ. ಜತೆಗೆ ತಮ್ಮ ಜೊತೆಗೆ ಪಕ್ಷದ ಬಹುತೇಕ ಮುಖಂಡರಿದ್ದು, ಪಕ್ಷವನ್ನು ತಾವೇ ಮುನ್ನಡೆಸುವ ಮಾತುಗಳನ್ನಾಡಿದ್ದಾರೆ.
ಚೆನ್ನೈನ ಮರಿನಾ ಬೀಚಿನಲ್ಲಿರುವ ಕರುಣಾನಿಧಿ ಸಮಾಧಿಗೆ ಭೇಟಿ ಕೊಟ್ಟು ಮಾತನಾಡಿದ ಅಳಗಿರಿ, ಪಕ್ಷದ ನಾಯಕರ ಪ್ರಕಾರ ಸ್ಟಾಲಿನ್ ಡಿಎಂಕೆ ನೇತೃತ್ವ ವಹಿಸುವುದಕ್ಕೆ ಸಹಮತವಿಲ್ಲ ಎಂದಿದ್ದಾರೆ. ಈ ಮೂಲಕ ದಶಕಗಳ ಕಾಲ ಕರುಣಾನಿಧಿ ಕಾಪಾಡಿಕೊಂಡು ಬಂದ ಪಕ್ಷದೊಳಗಿನ ಒಗ್ಗಟ್ಟು ಬಿರುಕುಗೊಂಡಿದೆ.
ಅಳಗಿರಿ ಕರುಣಾನಿಧಿಯವರ ಹಿರಿಯ ಮಗನಾಗಿದ್ದು, ಡಿಎಂಕೆ ಪಕ್ಷದಿಂದ 2009ರಲ್ಲಿ ಸಂಸದರಾಗಿದ್ದರು. ಜತೆಗೆ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದರು. ಒಂದು ಕಾಲದಲ್ಲಿ ಪಕ್ಷದಲ್ಲಿ ದೊಡ್ಡ ಮಟ್ಟದ ವರ್ಚಸ್ಸನ್ನು ಹೊಂದಿದ್ದ ಅಳಗಿರಿ, ಕ್ರಮೇಣ ಪಕ್ಷದಲ್ಲಿ ತಮ್ಮ ಹಿಡಿತವನ್ನು ಕಳೆದುಕೊಂಡಿದ್ದರು. ಅದಾದ ನಂತರ ಕರುಣಾನಿಧಿ, ಸ್ಟಾಲಿನ್ರನ್ನು ಡಿಎಂಕೆ ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಿಸಿದರು.
ಈಗ ತಂದೆಯ ಮರಣದ ನಂತರ ಪಕ್ಷದಲ್ಲಿ ಮತ್ತೆ ತಮ್ಮ ಹಿಡಿತವನ್ನು ಸಾಧಿಸಲು ಅಳಗಿರಿ ಯತ್ನಿಸುತ್ತಿದ್ದಾರೆ. ಇದಕ್ಕೆ ಸ್ಟಾಲಿನ್ ಪ್ರತಿಕ್ರಿಯೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು. ಡಿಎಂಕೆ ಪಕ್ಷ ಇಬ್ಬಾಗವಾಗುವ ಸಾಧ್ಯತೆಯೂ ಇದೆ. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕರಗಂ ಪಕ್ಷದ ಮುಖ್ಯಸ್ಥೆಯಾಗಿದ್ದ ಜಯಲಲಿತಾ ಮತ್ತು ಡಿಎಂಕೆಯ ಕರುಣಾನಿಧಿಯವರ ನಿಧನದಿಂದ ತಮಿಳುನಾಡು ರಾಜಕೀಯ ಅನಿಶ್ಚಿತತೆ ಹೆಚ್ಚಾಗಿದೆ.
ತಮಿಳರ ಅಸ್ತಿತ್ವಕ್ಕಾಗಿ, ಅಸ್ಮಿತೆಗಾಗಿ ಹೋರಾಡಿದ ಹಿರಿಯ ರಾಜಕೀಯ ನಾಯಕರ ಕೊರತೆಯೀಗ ತಮಿಳುನಾಡು ರಾಜಕೀಯವನ್ನು ಕಾಡುತ್ತಿದೆ.
Comments are closed.