ರಾಷ್ಟ್ರೀಯ

ಕಾಂಗ್ರೆಸ್ ನಾಯಕರೊಬ್ಬರಿಂದ ‘ಕಾಂಗ್ರೆಸ್ ಮುಕ್ತ ದೇಶ’ ಕ್ಕೆ ಕರೆ

Pinterest LinkedIn Tumblr


ಭೋಪಾಲ್: ಬಿಜೆಪಿ ನಾಯಕರು ಸದಾ ಕಾಂಗ್ರೆಸ್ ಮುಕ್ತ ದೇಶ ನಿರ್ಮಾಣಕ್ಕೆ ಕರೆ ನೀಡುತ್ತಿರುತ್ತಾರೆ. ಆದರೆ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು ‘ಕಾಂಗ್ರೆಸ್ ಮುಕ್ತ ರಾಜ್ಯ ಮತ್ತು ದೇಶ’ ಕ್ಕೆ ಕರೆ ನೀಡುವ ಮೂಲಕ ಪಕ್ಷಕ್ಕೆ ಇರಿಸುಮುರಿಸು ತಂದಿದ್ದಾರೆ.

ಎಐಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಾಬರಿಯಾ ಸೋಮವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟನಾತ್ಮಕ ಶಿಸ್ತನ್ನು ಹೊಗಳಿದ್ದ ಬೆನ್ನ ಹಿಂದೆಯೇ ರಾಜ್ಯದ ಪ್ರತಿಪಕ್ಷದ ಉಪನಾಯಕರಾಗಿರುವ ಬಾಲಾ ಬಚ್ಚನ್ ಬಾಯಿ ತಪ್ಪಿ ತಮ್ಮ ಪಕ್ಷವನ್ನೇ ನಿರ್ನಾಮ ಮಾಡಲು ಕರೆ ಕೊಟ್ಟಿದ್ದಾರೆ. ಅದು ಕೂಡ ಬಿಜೆಪಿಯನ್ನುದ್ದೇಶಿಸಿ ಅವರು ಈ ಮಾತುಗಳನ್ನಾಡಿದ್ದಾರೆ.

ಒಬ್ಬರ ಹಿಂದೊಬ್ಬರಂತೆ ರಾಜ್ಯದ ನಾಯಕರು ಪಕ್ಷಕ್ಕೆ ಮುಳುವಾಗುವಂಥ ಹೇಳಿಕೆ ನೀಡುತ್ತಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಎಐಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಾಬರಿಯಾ ಸೋಮವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟನಾತ್ಮಕ ಶಿಸ್ತನ್ನು ಹೊಗಳಿದ್ದರು. ಅಷ್ಟೇ ಅಲ್ಲ ಜವಾಹರಲಾಲ್ ನೆಹರು 1962ರ ಚೀನಾ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಶಿಸ್ತಿಗೆ ಹೆಸರಾದ ಆರ್‌ಎಸ್ಎಸ್‌ನ್ನು ಬಳಸಿಕೊಂಡಿದ್ದರು ಎಂದು ಹೇಳುವ ಮೂಲಕ ಪಕ್ಷಕ್ಕೆ ನಷ್ಟವನ್ನುಂಟು ಮಾಡುವಂತಹ ಬಹುದೊಡ್ಡ ಬಾಂಬ್ ಎಸೆದಿದ್ದರು. ಅವರ ಈ ಹೇಳಿಕೆಗಳಿಂದ ಚೇತರಿಸಿಕೊಳ್ಳುವ ಮುನ್ನವೇ ಬಾಲಾ ಬಚ್ಚನ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

”ಅಂಜರ್‌ದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆ, ಮಧ್ಯಪ್ರದೇಶ ಮತ್ತು ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸಬೇಕಿದೆ,” ಎಂದಿದ್ದಾರೆ.

ಬಚ್ಚನ್ ಬಾಯ್ ತಪ್ಪಿ ಹೇಳಿದ್ದಾದರೂ, ಈ ಇಬ್ಬರು ನಾಯಕರ ಹೇಳಿಕೆಗಳಿಂದ ಕೈ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ.

Comments are closed.