ಚೆನ್ನೈ: ನಿಮ್ಮನ್ನ ಅಪ್ಪ ಅಂತ ಕರೆಯೋ ಬದಲು ತಲೈವರ್ (ಲೀಡರ್) ಎಂದೇ ಕರೆಯುತ್ತಿದ್ದೆ. ಈಗ ಯಾಕೋ ಅಪ್ಪ ಎಂದು ಕರೆಯಬೇಕೆನಿಸುತ್ತಿದೆ. ಒಂದು ಬಾರಿ ಅಪ್ಪ ಅಂತ ಕರೀಲಾ?
ಹೀಗೆ ಭಾವುಕರಾಗಿ ಪತ್ರವೊಂದನ್ನು ಬರೆದು ಅದನ್ನು ಟ್ವಿಟ್ಟರ್ನಲ್ಲಿ ಹಾಕಿಕೊಂಡಿದ್ದಾರೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಮಗ ಎಂ.ಕೆ. ಸ್ಟಾಲಿನ್.
ನಿನ್ನೆಯಷ್ಟೇ ಕೊನೆಯುಸಿರೆಳೆದಿರುವ ಕರುಣಾನಿಧಿ ಅವರ ಸಾವಿಗೆ ತಮಿಳುನಾಡಿಗೆ ತಮಿಳುನಾಡೇ ಕಂಬನಿ ಮಿಡಿಯುತ್ತಿದೆ. ನಿನ್ನೆ ಸಂಜೆಯಿಂದ ಲಕ್ಷಾಂತರ ಅಭಿಮಾನಿಗಳು ಹಾಗೂ ಗಣ್ಯರು ಭೇಟಿ ನೀಡಿ ಕೊನೆಯ ದರ್ಶನ ಪಡೆದಿದ್ದಾರೆ. ಇಂದು ಸ್ಟಾಲಿನ್ ಟ್ವೀಟ್ ಮಾಡಿರುವ ಈ ಪತ್ರ ಅವರಿಗೆ ತಮ್ಮ ಅಪ್ಪನೆಡೆಗಿರುವ ಪ್ರೀತಿಯನ್ನು ಹೊರಹಾಕುವಂತೆ ಮಾಡಿದೆ.
ಪ್ರತಿಬಾರಿ ಹೊರಹೋಗುವಾಗ ನಮಗೆಲ್ಲ ಹೇಳಿ ಹೋಗುತ್ತಿದ್ದ ನೀವು ಈ ಬಾರಿ ಯಾಕೆ ಯಾರಿಗೂ ಹೇಳದೇ ಹೋಗಿಬಿಟ್ಟಿರಿ? 33 ವರ್ಷಗಳ ಹಿಂದೆ ಯಾವ ರೀತಿ ಕೆಲಸ ಮಾಡುತ್ತಿದ್ದಿರೋ ಕೊನೆಯವರೆಗೂ ಅದೇ ಉತ್ಸಾಹದಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಿರಿ. ಸುದೀರ್ಘ ಜೀವನವನ್ನು ತೃಪ್ತಿಕರವಾಗಿ ಮುಗಿಸಿ ಹೊರಟುಹೋಗಿದ್ದೀರಿ. ತಮಿಳು ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಆತ್ಮತೃಪ್ತಿಯನ್ನು ಉಳಿಸಿಕೊಂಡು ಹೋಗಿದ್ದೀರಿ ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ಬರೆದು ಆ ಪತ್ರದ ಫೋಟೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Comments are closed.